Sunday, November 24, 2024

ಬೆಂಬಿಡದೆ ಕಾಡುವ ಕರ್ಮಫಲ:-

 



ಮಹಾಭಾರತದಲ್ಲಿ ಎಷ್ಟೊ ಯೋಧರು ನಿಸ್ವಾರ್ಥದಿಂದ, ಲೋಕಕಲ್ಯಾಣಕ್ಕಾಗಿ ಒಳ್ಳೆಯದು ಮಾಡಿ, ಧರ್ಮದಿಂದ,  ವೀರ ಮರಣವನ್ನು ಹೊಂದಿರುತ್ತಾರೆ. ಅಂಥವರಲ್ಲಿ, ಧರ್ಮದ ಒಳಿತಿಗಾಗಿ, ಹಸ್ತಿನಾಪುರದ ರಕ್ಷಣೆಗಾಗಿ, ಆಜನ್ಮ ಬ್ರಹ್ಮಚಾರಿ, ಸೋಲಿಲ್ಲದ ಸರದಾರ, ಇಚ್ಛಾಮರಣಿ, ಪರಾಕ್ರಮಿ, ಅಜೇಯರೆ ನಿಸಿಕೊಂಡ ಮೊದಲಿಗರು ಕುರುವಂಶದ ಪಿತಾಮಹ, ಗಂಗಾ ಪುತ್ರ ಭೀಷ್ಮರು ಸಿಂಹಾಸನಕ್ಕಾಗಲಿ, ಅಧಿಕಾರಕ್ಕಾಗಲೀ, ಆಸೆಪಡದೆ, ಕೊಟ್ಟ ಮಾತಿಗೆ ತಪ್ಪದಂತೆ  ಕುರುವಂಶದ ಉನ್ನತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ, ಹಸ್ತಿನಾಪುರದ ರಕ್ಷಣೆ ಮಾಡುವ ಪಣತೊಟ್ಟು, ಹೋರಾಡಿ ಕೊನೆಗೆ ರಕ್ತಸಿಕ್ತ ದೇಹದ,  ಬಾಣಗಳ ಹಾಸಿಗೆ ಮೇಲೆ ೫೮ ದಿನಗಳ ಯಾತನೆ,  ನೋವುಗಳನ್ನು ಸಹಿಸಿಕೊಂಡು ಇಚ್ಛಾಮರಣವನ್ನು ಪಡೆದ ಪಿತಾಮಹ ಭೀಷ್ಮರು. 

ಪಿತಾಮಹ ಭೀಷ್ಮರು  ಮಾಡಿದ ಪಾಪ ಪುಣ್ಯಗಳನ್ನು ಲೆಕ್ಕ ಹಾಕಿದರೆ ಪಾಪಗಳ ಲೆಕ್ಕ ಹುಡುಕಿದರೂ ಒಂದೇ ಒಂದು  ಸಿಗುವುದಿಲ್ಲ. ಪುಣ್ಯ ಹಾಗೂ ಧರ್ಮ ಮಾರ್ಗದಲ್ಲಿ ನಡೆದು ಎಲ್ಲರಿಗೂ ಒಳಿತನ್ನೇ ಬಯಸುತ್ತಿದ್ದು, ಅಪಾರ ಪುಣ್ಯ ಕೆಲಸಗಳನ್ನು ಮಾಡಿದ ಭೀಷ್ಮರಿಗೆ ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸುವ ಶಿಕ್ಷೆ ಯಾಕೆ ಬಂದಿತು ಎಂಬ ಪ್ರಶ್ನೆಗೆ ಕೃಷ್ಣನೇ ಉತ್ತರ ಕೊಟ್ಟಿದ್ದಾನೆ. 

ಮಹಾಭಾರತದ ಯುದ್ಧದ ಸಮಯದಲ್ಲಿ ಅಧರ್ಮದ ಪಕ್ಷ ಎಂದು ಗೊತ್ತಿದ್ದರೂ ಅವರ ಪರವಾಗಿ ನಿಂತ ಪಿತಾಮಹ ಭೀಷ್ಮರು ವೀರಾವೇಶದಿಂದ ಹೋರಾಡಿ  ಯುದ್ಧವನ್ನು ಮಾಡಿದರು. ಕೊನೆಗೆ ಶಿಖಂಡಿ ಎದುರು ಬಂದಾಗ ಕತ್ತಿಯನ್ನು ಬಿಟ್ಟು ನಿಶಸ್ತ್ರರಾಗಿ ನಿಂತಾಗ ಅರ್ಜುನನು ಬಹಳ ದುಃಖದಿಂದ ಕರ್ತವ್ಯ ಪಾಲಿಸುವ ಸಲುವಾಗಿ ತನ್ನ ಬಾಣಗಳಿಂದ ಪಿತಾಮಹರನ್ನು ಹೊಡೆದು ಕೆಳಗೆ ಬೀಳಿಸಿದ. ನಂತರ ಪಿತಾಮಹರ ಆಸೆಯಂತೆ, ದಕ್ಷಿಣಾಯನ ಮುಗಿದು ಉತ್ತರಾಯಣ ಪುಣ್ಯಕಾಲ  ಬಂದ ಮೇಲೆ  ಪ್ರಾಣೋತ್ಕ್ರ್ ಕ್ರಮಣ  ಮಾಡುವೆ ಎಂಬ ಭೀಷ್ಮರ ಮಾತಿನಂತೆ  ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದನು. ಉತ್ತರಾಯಣ ಬರಲು ೫೮ ದಿನಗಳ ಕಾಲ ಬಾಣಗಳ ಹಾಸಿಗೆಯ ಮೇಲೆ  ನೋವು ಹಾಗೂ ಯಾತನೆಯನ್ನು ಅನುಭವಿಸಿದರು. 

ಬಾಣಗಳ ಹಾಸಿಗೆಯ ಮೇಲೆ ಮಲಗಿದ ಪಿತಾಮಹರನ್ನು ಉಪಚರಿಸಲು ದೇಶದ ಮೂಲೆ ಮೂಲೆಯಿಂದ ವೈದ್ಯ ಪಂಡಿತರುಗಳನ್ನು ಕರೆಸುತ್ತಿದ್ದರು. ಆದರೆ ಅವೆಲ್ಲವನ್ನು ನಿರಾಕರಿಸಿದರು. ಉಳಿದ ಸಮಯದಲ್ಲಿ ಅವರನ್ನು ಕಂಡು ಮಾತನಾಡಿಸಿ ಆಶೀರ್ವಾದ ಪಡೆಯಲು ನೂರಾರು ಜನ ನಿತ್ಯವೂ ಬರುತ್ತಿದ್ದರು. ಎಲ್ಲರೊಂದಿಗೆ ಸಂತೋಷದಿಂದ ಮಾತನಾಡಿದ ಭೀಷ್ಮ ಪಿತಾಮಹರಿಗೆ ಚಿಂತೆಯೊಂದು ಕಾಡುತ್ತಿತ್ತು. ಇಚ್ಛಾಮರಣಿಯಾದ ನಾನು ಯಾವಾಗ ಬೇಕಾದರೂ ದೇಹತ್ಯಾಗ ಮಾಡಬಹುದಿತ್ತು. ಆದರೆ ಹೀಗೇಕೆ ಬಾಣಗಳ ಹಾಸಿಗೆಯ ಮೇಲೆ ಮಲಗಿ ನೋವನ್ನು ಅನುಭವಿಸುವಂತಹ ಶಿಕ್ಷೆ ನನಗೇಕೆ ಬಂದಿತು ಎಂದುಕೊಳ್ಳುತ್ತಿದ್ದ ಭೀಷ್ಮರ ಬಳಿ ಒಂದು ದಿನ ಶ್ರೀಕೃಷ್ಣ ಬಂದನು. 

ಶ್ರೀಕೃಷ್ಣನು ಬಂದಾಗ ಅವರ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಕೃಷ್ಣನ ಬಳಿ ಕೇಳಿದರು. ಹೇ ವಾಸುದೇವ, ನನಗೆ ನೆನಪಿರುವಂತೆ ನನ್ನ ಹಿಂದಿನ ಹತ್ತು  ಜನ್ಮಗಳನ್ನು ನೋಡಿದಾಗ ಆ ಹತ್ತು ಜನ್ಮದಲ್ಲೂ ಒಂದೇ ಒಂದು ಪಾಪ ಕಾರ್ಯವನ್ನು ಮಾಡಿಲ್ಲ ಹೀಗಿರುವಾಗ ಇಚ್ಛಾಮರಣಿಯಾದ ನಾನು ಸಾಯುವ ಸಮಯದಲ್ಲಿ ಬಾಣಗಳ ಹಾಸಿಗೆಮೇಲೆ ಮಲಗಿ ಯಾತನೆ ಹಾಗೂ ಆಗುವ ನೋವನ್ನು ಸಹಿಸಿಕೊಳ್ಳುವಂಥ ಶಿಕ್ಷೆ ನನಗೇಕೆ ಬಂದಿದೆ ಎಂದು ನೊಂದು ಕೇಳಿದರು.  ಮುಗುಳ್ನಗುತ್ತಾ ಕೃಷ್ಣನು, ಪಿತಾಮಹ ನಿಮಗೆ ನೆನಪಿರುವಂತೆ ಹತ್ತು ಜನ್ಮಗಳಲ್ಲಿ ನೀವು ಒಂದೇ ಒಂದು ಪಾಪವನ್ನು ಮಾಡಿಲ್ಲ. ಆದರೆ ನಿಮಗೆ ಗೊತ್ತಿರದ ೧೦ ಜನ್ಮದ ಹಿಂದಿನ ಹನ್ನೊಂದನೇ ಜನ್ಮದಲ್ಲಿ ನೀವೊಬ್ಬ ರಾಜರಾಗಿದ್ದೀರಿ. ನೀವು ಶಿಕಾರಿ ಪ್ರಿಯರು ಆಗಿದ್ದಿರಿ ನಿಮ್ಮ ಹೆಚ್ಚಿನ ಸಮಯವನ್ನು ಕಾಡಿನಲ್ಲಿ ಬೇಟೆಯಾಡುವುದರಲ್ಲಿ ಕಳೆಯುತ್ತಿದ್ದಿರಿ. ಒಂದು ದಿನ ಬೇಟೆಯಾಡಲು ಹೋಗುತ್ತಿದ್ದಾಗ ನಿಮಗೆ ಅಡ್ಡವಾಗಿ ಒಂದು ಸರ್ಪ ಬರುತ್ತದೆ ಹೀಗೆ ಅಡ್ಡಬಂದ ಸರ್ಪವನ್ನು ಯಾವ ಯೋಚನೆಯನ್ನೂ ಮಾಡದೆ ಎತ್ತಿ ಅದನ್ನು ಒಂದು ಬದಿಗೆ ಬಿಸಾಡಿದಿರಿ.

ಹಾಗೆ ಬಿಸಾಕಿದ ಸರ್ಪವು ಮುಳ್ಳುಗಳಿರುವ ಪೊದೆಗಳ ಮೇಲೆ ಬಿತ್ತು. ಅದು ಮುಳ್ಳಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟು ಪೊದೆಗಳಲ್ಲಿದ್ದ ಮುಳ್ಳುಗಳು ಚುಚ್ಚಿ ನೋವಾಗುತ್ತಿತ್ತು. 

ಈ ರೀತಿಯಾಗಿ ಅದಕ್ಕೆ ಮುಳ್ಳಿನಿಂದ ಚುಚ್ಚಿ ಯಾತನೆ ಯಾಗುತ್ತಿದ್ದಾಗ  ಪರಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿತ್ತು. ಹೇ ಪರಮೇಶ್ವರ ನನ್ನ ನೋವಿಗೆ ಕಾರಣವಾದ ರಾಜನು ಸಹ ನನ್ನ ಹಾಗೆ ಮುಳ್ಳುಗಳಿಂದ ಚುಚ್ಚಿಸಿಕೊಂಡು ಯಾತನೆ ಅನುಭವಿಸುವಂತಾಗಲಿ ಎಂದು ಬೇಡುತ್ತಿತ್ತು.

ಹೀಗೆ ಪರಶಿವನನ್ನು ಪ್ರಾರ್ಥಿಸುತ್ತಲೇ ಯಾತನೆ ಅನುಭವಿಸುತ್ತಾ ೧೮ ದಿನಗಳ ಕಾಲ ಕಳೆದ ಮೇಲೆ ಪ್ರಾಣಬಿಟ್ಟಿತು. 

ಕೃಷ್ಣನಿಂದ ಈ ಕಥೆ ಕೇಳಿದ ಪಿತಾಮಹರು ಹತ್ತು ವರ್ಷಗಳ ಹಿಂದಿನ ಪಾಪ ಸುಳ್ಳೋ, ನಿಜವೋ, ಎಂಬ ಅನುಮಾನದಿಂದ ಕೃಷ್ಣನನ್ನು ನೋಡುತ್ತಾ ಕೇಳಿದರು. ವಾಸುದೇವ ಹತ್ತು ಜನ್ಮಗಳ ಹಿಂದಿನ ಶಾಪ ಅಂದರೆ ಶಿಕ್ಷೆಯಾದ ಮುಂದಿನ ಜನ್ಮದಲ್ಲೇ ಈ ಶಿಕ್ಷೆಯನ್ನು ಅನುಭವಿಸಬೇಕಿತ್ತು. ಹತ್ತು ಜನ್ಮಗಳ ನಂತರ ಅನುಭವಿಸುವುದು ಎಂದರೆ ಹೇಗೆ ಎಂದು ಕೇಳಿದರು.

ಪಿತಾಮಹ ಮುಂದಿನ ಹತ್ತು ವರ್ಷದಲ್ಲಿ  ಪಾಪದ ಕೊಡ ತುಂಬುವಂಥ ಒಂದೇ ಒಂದು ಪಾಪದ ಕೆಲಸವನ್ನು ನೀವು ಮಾಡಲಿಲ್ಲ. ಹೀಗಾಗಿ ನೀವು ಪುಣ್ಯ ಜೀವಿಗಳು ಆದಿರಿ. ಹಾಗಾಗಿ ಅದೆಲ್ಲ ಈ ಜನ್ಮದಲ್ಲಿ ನಿಮಗೆ ಸಿಕ್ಕಿತು. 

ಮತ್ತೂ ಆಶ್ಚರ್ಯದಿಂದ ಭೀಷ್ಮರು, ಹೇ ವಾಸುದೇವ ಈ ಜನ್ಮದಲ್ಲಿ ನನಗೆ ನೆನಪಿರುವಂತೆ ಒಂದೇ ಒಂದು ಅಪರಾಧವನ್ನು ನಾನು ಮಾಡಿಲ್ಲ ಧರ್ಮಮಾರ್ಗದಲ್ಲಿ ನಡೆದಿದ್ದೇನೆ. ಅದಕ್ಕೆ ಕೃಷ್ಣನು ಪಿತಾಮಹ ಯಾಕೆ ಪಾಪ ಮಾಡಿಲ್ಲವೇ? ನೆನಪಿಸಿಕೊಳ್ಳಿ ಹಸ್ತಿನಾಪುರದ ಅಧರ್ಮಿ ರಾಜನ ಪರ ನಿಂತು, ಸಿಂಹಾಸನವನ್ನು ಕೊನೆ ಉಸಿರಿರುವರೆಗೂ ರಕ್ಷಿಸುತ್ತೇನೆ ಎಂದು ಮಾತುಕೊಟ್ಟು, ಅಧರ್ಮಕ್ಕೆ ಟೊಂಕಕಟ್ಟಿ ನಿಲ್ಲಲಿಲ್ಲವೇ? ತುಂಬಿದ ಸಭೆಯಲ್ಲಿ ಕುಲವಧುವಿನ ಮಾನ ಹೋಗುತ್ತಿದ್ದರೂ ಅದನ್ನು ತಡೆಯದೆ ಸಹಿಸಲಿಲ್ಲವೇ? 

ಅಧರ್ಮಿಗಳಾದ ದುರ್ಯೋಧನ, ಅವನ ಅಪ್ಪ ದೃತರಾಷ್ಟ್ರ ಮಾಡುವ ಅಧರ್ಮವನ್ನು ಕಂಡು ಕಾಣದಂತೆ ಅವರ ಪಕ್ಷದಲ್ಲಿ ನಿಂತು ಹಸ್ತಿನಾಪುರದ ಸಿಂಹಾಸನವನ್ನು ರಕ್ಷಿಸುತ್ತೇನೆ ಎಂದು ಮಾತು ಕೊಟ್ಟಿರಿ. ಅವರಿಗೆ ಬೆಂಬಲವಾಗಿ ನಿಂತು ಧರ್ಮದ ವಿರುದ್ಧ ಹೋರಾಟಕ್ಕೆ ಇಳಿದಿರಿ.

ಅದೆಷ್ಟು ಅಮಾಯಕರನ್ನು ಅಧರ್ಮದ ಪರವಾಗಿ ನಿಂತು ಕೊಂದುಹಾಕಿದಿರಿ.

ನಿಮ್ಮ ಪಾಪದ ಕೊಡ ತುಂಬಲು ಇಷ್ಟು ಸಾಲದೇ ಎಂದು ಕೇಳಿದನು. 

ಪಶ್ಚಾತಾಪದಿಂದ ಕಣ್ಣೀರು ಹರಿಸುತ್ತ ಎಲ್ಲವನ್ನೂ ಕೇಳಿಸಿಕೊಳ್ಳುವ ವೇಳೆಗೆ ಅವರ ಪಾಪದ ಶಿಕ್ಷೆಗಳÀÄ ಮುಗಿದಿತ್ತು ಅವರ ಮುಖದಲ್ಲಿ ತೇಜಸ್ಸು ಮಾಘಮಾಸದ ಶುಕ್ಲ ಪಕ್ಷ ಉತ್ತರಾಯಣದ ಸೂರ್ಯನು ಬಂದಿದ್ದ. ಸಾಕ್ಷಾತ್ ಭಗವಂತನಾದ ಶ್ರೀಕೃಷ್ಣನ ದರ್ಶನ ಭಾಗ್ಯದಿಂದ. ಅವಶೇಷದ ಪಾಪಗಳೆಲ್ಲವು ಸುಟ್ಟು ಭಸ್ಮವಾಯಿತು. ಭಗವಂತನನ್ನು ಕಣ್ತುಂಬಾ ನೋಡುತ್ತಾ ಇಚ್ಛಾಮರಣಿಯಾದ ಭೀಷ್ಮರು  ಪ್ರಾಣೋತ್ಕ್ರಮಣಗೈದು ಪರಮಾತ್ಮನ ಸಾನಿಧ್ಯವಾದ ವೈಕುಂಟಕ್ಕೆ ಹೋದರು. 

ಯತೇಂದ್ರಿಯ ಮನೋ ಬುದ್ದಿ, ಮುನಿರ್ಮೋಕ್ಷ ಪರಾಯಣ!

ವಿಗತೇಚ್ಚಾಭಯ ಕ್ರೋದ, ಯ ಸದಾ ಮುಕ್ತ ಏವ ಸಹ! 

ಇಂದ್ರಿಯಗಳನ್ನೂ ಮನಸ್ಸು ಮತ್ತು ಬುದ್ಧಿಯನ್ನೂ  ಯಾವಾಗಲೂ ತನ್ನ ವಶದಲ್ಲಿಟ್ಟುಕೊಂಡು, ಮೋಕ್ಷವನ್ನೇ ತನ್ನ  ಪರಮ ಗುರಿಯನ್ನಾಗಿ ಮಾಡಿಕೊಂಡು ಬಯಕೆ, ಭಯ  ಮತ್ತು  ಕ್ರೋಧಗಳಿಂದ ಬಿಡುಗಡೆ ಹೊಂದಿರುವ ಆ ಮುನಿಯು. ಮೋಕ್ಷವನ್ನು ಪಡೆಯುತ್ತಾನೆ.

ಎಂ.ಕೆ. ಇಂದಿರಾ ಹೇಳಿದ ಕಾಫಿಯ ಕಥೆ...


ಕೆಲದಿನ ಅದು ಮಡಿವಂತರಿಗೆ ನಿಷೇಧವಾಗಿತ್ತು. ಅದರಲ್ಲೂ ಮಡಿ ಹೆಂಗಸರು ಕುಡಿಯಲೇಬಾರದು. ಆದರೆ ಅಮಲು ಹತ್ತಿಯಾಗಿತ್ತು. ಕಡೆಗೆ ಅದರ ಚಟ ಪೂರಾ ಹತ್ತಿದವರೊಬ್ಬರು ಅದಕ್ಕೆ "ಕೈಲಾಸದ ಕಷಾಯ" ಎಂದು ಹೆಸರಿಟ್ಟು ವೇದ_ವ್ಯಾಸರಂತೆ ಅದಕ್ಕೊಂದು ಪೌರಾಣಿಕ ಕಥೆಯನ್ನು ಕಲ್ಪಿಸಿ ಹೇಳಿದರು. ಅದು ಕಲ್ಪನೆಯಾದರೂ ಸ್ವಾರಸ್ಯವೂ ಸಹಜವೂ ಆಗಿ ಕಾಣಿಸುತ್ತೆ.

"ಭಗೀರಥನ ಪ್ರಾರ್ಥನೆಯ ಮೇರೆಗೆ ಗಗನಾಂತರದಿಂದ  ಧುಮುಕಿದ ಗಂಗೆಯನ್ನು ಪರಶಿವ ತಡೆದು ಜಟೆಯಲ್ಲಿ ಬಿಗಿದು ಕೂರಿಸಿಕೊಂಡ. ಮುಂದೆ ಗಂಗೆ ಸಾವಧಾನವಾಗಿ ಹರಿದು ಭಾಗೀರಥಿ ಎನಿಸಿಕೊಂಡಳು.

ಸಗರಪುತ್ರರೇನೋ ಮುಕ್ತಿ ಪಡೆದರು, ಆದರೆ ಕೈಲಾಸದಲ್ಲಿ ಗಂಗೆಯನ್ನು ತಲೆಯಲ್ಲಿ ಹೊತ್ತ  ಪರಮೇಶ್ವರನಿಗೆ  ಅಸಾಧ್ಯ ನೆಗಡಿ ಪ್ರಾರಂಭವಾಯ್ತು. ಏನು ಮಾಡಿದರೂ ನೆಗಡಿ ನಿಲ್ಲಲೊಲ್ಲದು. ಶಿವನ ಜಟೆಯಿಂದ ಧುಮುಕುತ್ತಿದ್ದುದಲ್ಲದೆ  ಗಂಗೆ ಆತನ ಮೂಗಿನಿಂದಲೂ ದ್ವಿಧಾರೆಯಾಗಿ ಇಳಿಯತೊಡಗಿದಳು. ತಲೆನೋವು, ಮೈ ನೋವು, ಜ್ವರ ಎಲ್ಲಾ ಹೊಡೆದು ಬಾರಿಸಿತು ಹರನಿಗೆ. ಮೂಗು ಒರೆಸಿಕೊಳ್ಳಲು ಅವನಲ್ಲಿ ಒಂದು ತುಂಡು ಬಟ್ಟೆಯಿಲ್ಲ. ಕಡೆಗೆ ವಿಧಿಯಿಲ್ಲದೆ ಪಾರ್ವತಿಯ ಪೀತಾಂಬರದ ಸೆರಗನ್ನೇ ಮೂಗಿಗೆ ಒತ್ತಿ ಹಿಡಿದ.

ಹರನ ಕಾಯಿಲೆಯ ವಿಷಯ ತಿಳಿದು ಅಗ್ನಿದೇವ ಓಡಿ ಬಂದು ಕೈಲಾಸದಲ್ಲಿ ಧಗೆ ಎಬ್ಬಿಸಿ ಎಲ್ಲರಿಗೂ ಬೆಚ್ಚಗೆ ಮಾಡಿದ. ಉಹೂಂ !  ಜಗ್ಗಲಿಲ್ಲ. ಮುಂದೇನೆಂದು  ದೇವಾಧಿದೇವತೆಗಳಿಗೆ  ಚಿಂತೆಯಾಗಿ ಕಡೆಗೆ ದೇವವೈದ್ಯನಾದ ಧನ್ವಂತರಿಯನ್ನು ಕರೆಸಿದರು.

ಅವನು ಪರಶಿವನ ನಾಡಿ ಹಿಡಿದು ನೋಡಿದ. ಶಿವನ ಮೈಯ್ಯ ಜ್ವರದ ಜೊತೆಗೆ  ಅಗ್ನಿಯ  ಶಾಖವೂ ಸೇರಿ ಶಿವನ ಜ್ವರ ನೂರಾಹತ್ತು ಡಿಗ್ರಿಯಾಗಿತ್ತು. ಧನ್ವಂತರಿ ಇದುವರೆಗೆ ಯಾರಿಗೂ ಕೊಡದ ಒಂದು ಔಷಧಿಯನ್ನು ಈಗ ಜಗದೀಶನಿಗೆ ಕೊಡಲೇಬೇಕಾಯ್ತು. 

ಸಂಜೀವಿನಿ ಪರ್ವತದಿಂದ ಆ ಬೀಜವನ್ನು ತರಬೇಕು. ಅದಕ್ಕೆ ಯಾರು ಸಮರ್ಥರು ಎಂದು ಯೋಚಿಸಿ ಕಡೆಗೆ ಆ ಕೆಲಸಕ್ಕೆ ವಾಯುಪುತ್ರನೇ ಸರಿಯೆಂದು ಭುಲೋಕದ ಋಷ್ಯಮೂಕ ಪರ್ವತದ ಕೋಡುಗಲ್ಲಿನ ಮೇಲೆ ಕೂತಿದ್ದ ಮಾರುತಿಯನ್ನು ಕರೆತರಲಾಯ್ತು. ಪರಮೇಶ್ವರನ ಫಜೀತಿ ನೋಡಿ ಅವನಿಗೂ ಗಾಬರಿಯಾಗಿತ್ತು. 

ಧನ್ವಂತರಿಯ ಆಜ್ಞೆಯ ಮೇರೆಗೆ ಹನುಮಂತ ಹಾರಿದ ಸಂಜೀವಿನಿ ಪರ್ವತಕ್ಕೆ.’ ಕೆಂಪು ಸಣ್ಣ ಹಣ್ಣು, ತಿನ್ನಲು ಸಿಹಿ ಸಿಹಿ, ಒಳಗೆ ದಪ್ಪ ಬೀಜ ಇರುತ್ತೆ. ಅದನ್ನ ಜಾಗ್ರತೆ ತೆಗೆದುಕೊಂಡು ಬಾ' ಎಂದು ಹೇಳಿದ್ದ ಧನ್ವಂತರಿ. ಸರಿ, ಸಂಜೀವಿನಿ ಪರ್ವತವನ್ನು ಗರಪಾಡಿದ ಪ್ರಾಣೇಶ. ಅಲ್ಲಿ ಆ ಹಣ್ಣಿನ ಗಿಡಗಳ ವನವೇ ಇದೆ. ಮೊದಲು ತಾನು ತಿಂದು ರುಚಿ ನೋಡಿದ. ಬಹು ರುಚಿಯಾಗಿತ್ತು. ಹಸಿಬೀಜವನ್ನೇ ನುಂಗಿಬಿಟ್ಟ. ಹನುಮನ ಬಲ ನೂರ್ಮಡಿಯಾಯ್ತು.

ಗಿಡಗಳನ್ನೇ ಕಿತ್ತು ಹೊರೆಕಟ್ಟಿ ಹೊತ್ತ ಹನುಮ. ಅವನು ಅಂತರಿಕ್ಷ ಮಾರ್ಗದಲ್ಲಿ ರಭಸದಿಂದ ಹಾರಿ ಬರುತ್ತಿದ್ದಾಗ ಪಕ್ವವಾದ ಕೆಲವು ಹಣ್ಣುಗಳು ಭರತಖಂಡದ ಮೇಲೆ ಅಲ್ಲಲ್ಲಿ ಉದುರಿದವು. ಕ್ರಮೇಣ ಅವು ಭೂಮಿಯಲ್ಲಿ ಸಮೃದ್ಧವಾಗಿಯೇ ಬೆಳೆದವು. 

ಅತ್ತ ಕೈಲಾಸದಲ್ಲಿ ಕೂಡಲೇ ಧನ್ವಂತರಿ ಒಣಗಿದ ಹಣ್ಣನ್ನು ಒಡೆದು, ಬೀಜ ತೆಗೆದು ಅಗ್ನಿಗೆ ಕೊಟ್ಟ. ಅಗ್ನಿ ಹದವಾಗಿ  ಹುರಿದು ಕೊಟ್ಟ. ಅದನ್ನು ಅರೆದು ಪುಡಿಮಾಡಿ ಕಷಾಯಕ್ಕಿಟ್ಟಾಯಿತು. ಅದಕ್ಕೆ ಹಾಲು_ಸಕ್ಕರೆ ಬೇಕು. ಸರಿ, ಗಣಪ, ಸುಬ್ರಹ್ಮಣ್ಯರು  ಓಡಿದರು. ದೇವಲೋಕದಿಂದ  ಸಕ್ಕರೆ ಬಂತು. ವೈಕುಂಠದ ಕ್ಷೀರಸಾಗರದಿಂದ ಹಾಲು ಬಂತು. ಘಂ ಎನ್ನುವ ಕಷಾಯ ತಯಾರಾಯಿತು. 

ದೊಡ್ಡ ಕರಂಡದ ತುಂಬಾ ಕಷಾಯ ತುಂಬಿ ಪರಮೇಶ್ವರನಿಗೆ ಕೊಟ್ಟ  ಧನ್ವಂತರಿ. ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಉಮೆ ಶಂಕರನ ಮುಖವನ್ನೇ ನೋಡುತ್ತಿದ್ದಳು. ಆರು ಗಳಿಗೆಯಲ್ಲಿ ಹರನ ಮೂಗಿನ ಗಂಗಾಪ್ರವಾಹ ನಿಂತಿತು. ಮೈ ಹಗುರವಾಗಿ ಜ್ವರಬಿಟ್ಟು ಪರಮೇಶ್ವರ ಪ್ರಸನ್ನನಾದ.

ಈ ಪವಾಡವನ್ನು ಕಂಡು ದೇವತೆಗಳು ವಿಸ್ಮಯಪಟ್ಟರು. ಉಳಿದ ಕಷಾಯವನ್ನು ಧನ್ವಂತರಿ ನೆರೆದವರೆಲ್ಲರಿಗೂ ಬಿಸಿಬಿಸಿಯಾಗಿ ಕೊಟ್ಟ. ಅಮೃತ ಕುಡಿದು ಕುಡಿದು ಸೀ ಬಡಿದು ಹೋದ ಬಾಯಿಗೆ ಈ ಕಷಾಯ ಅಮೃತಕ್ಕಿಂತ ರುಚಿಯಾಗಿ ಕಂಡಿತು. ಎಲ್ಲರಿಗೂ ಮೈ ಹುರುಪು ಬಂದಿತು. ನಂತರ ದೇವತೆಗಳು ಕೇಳಿದರು ಆ ಬೀಜದ ಹೆಸರೇನು..ಎಂದು?.

ಧನ್ವಂತರಿ ಯೋಚಿಸಿದ. ಇವರಿಗೆ ತಿಳಿದರೆ ಸಂಜೀವಿನಿ ಪರ್ವತವೇ ಖಾಲಿಯಾದೀತು  ಎಂದುಕೊಂಡು, ಯಾವಾಗಲೂ ಕೆಲವು ಮಹತ್ವದ ಔಷಧಿಗಳ ಹೆಸರು ಹೇಳಬಾರದು. ಹೇಳಿದರೆ ಅದರ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ನೀವೆಲ್ಲ ಕೇಳಿದರೆ ಸಂಜೀವ ಇದನ್ನು ಕೊಟ್ಟಾನೆ..? ಬೀಜವನ್ನು ಕಪಿರಾಜ ತಂದುಕೊಟ್ಟಿದ್ದರಿಂದ  ನೀವು  ಕಪಿಬೀಜ ಎಂದು ಕರೆಯಿರಿ. ಇಷ್ಟು ಸಾಕು, ಇನ್ನು ಹೊರಡಿ ಎಂದಾಗ ಎಲ್ಲರೂ ಹೊರಟರು.

ಮೊದಮೊದಲು ಕಲಿಯುಗದಲ್ಲಿ ಆ ಕಪಿಬೀಜದ ಹಣ್ಣುಗಳನ್ನು ಮಂಗಗಳೇ ತಿನ್ನುತ್ತಿದ್ದವು. ಮಾರುತಿಯ ಅಂಶದಿಂದ ಹುಟ್ಟಿದ ಅಂದರೆ ಮಂಗನಮೂತಿಯ ಕೆಂಪು ಆಂಗ್ಲ ಜನ ಮೊಟ್ಟಮೊದಲು ಈ ಕಪಿಬೀಜವನ್ನು ಕಂಡುಹಿಡಿದರು... ಕಫಿ ಎಂದರು...

ಬರುಬರುತ್ತಾ 

ಅದು ಕಾಫಿಯಾಯಿತು....."