Monday, January 29, 2024

Poverty

 ಬಡತನ ತಮಗೆ ಅಂಟಿದ ಶಾಪ ಅಂತಾನೇ ಎಲ್ಲರೂ ಭಾವಿಸುತ್ತಾರೆ


ಬಡತನದಿಂದಾಗಿಯೇ ತಾವು ಸಾಧನೆ ಮಾಡಲಾಗಲಿಲ್ಲ ಅಂತ ಕೊರಗುವವರೂ ಇದ್ದಾರೆ. ಬಡತನವೇ ತಮ್ಮೆಲ್ಲ ಸುಖವನ್ನು ಕಿತ್ತುಕೊಂಡಿತು ಅಂತ ದುಃಖಿಸುವವರೂ ಇದ್ದಾರೆ. ಇವರಿಗೆ ಬಡತನವೇ ಈ ಜಗತ್ತನ್ನು ಪೊರೆ ದಿದೆ ಎಂಬ ಸತ್ಯ ತಿಳಿದಿಲ್ಲ. ಬಡತನದಿಂದ ಉತ್ತಮ ಬದುಕು ಕಟ್ಟಿಕೊಂಡ ವರು ಬಹಳಷ್ಟು ಜನರಿದ್ದಾರೆ. ಅದೇ ಶ್ರೀಮಂತಿಕೆಯಿಂದ ನೆಮ್ಮದಿಯ ಬದುಕು ಕಟ್ಟಿಕೊಂಡವರು ವಿರಳ. ಏಕೆಂದರೆ, ಬಡತನ ಕಲಿಸುವಷ್ಟು ಜೀವನಪಾಠವನ್ನು ಶ್ರೀಮಂತಿಕೆ ಕಲಿಸಲಾರದು. ಹೊಟ್ಟೆಯಲ್ಲಿನ ಹಸಿವು ಬುದ್ಧಿಗೆ, ಭುಜಕ್ಕೆ ಕಸುವು ತುಂಬುತ್ತದೆ. ಅದೇ ಹೊಟ್ಟೆ ತುಂಬಿದವರಿಗೆ ಅದ್ಯಾವ ಕಸುಬು ಗೊತ್ತಿರುವುದಿಲ್ಲ. ಇದರಿಂದಾಗಿಯೇ, ಸಾಧಕನ ಮಗ ಸಾಧಕನಾಗಲಾರ. ಸಾಮಾನ್ಯನ ಮಗ ಅಸಾಮಾನ್ಯ ಸಾಧನೆ ಮಾಡುತ್ತಾನೆ. ಹಸಿವಿನ ಶಕ್ತಿ ಅಷ್ಟರ ಮಟ್ಟಿಗೆ ವ್ಯಕ್ತಿಯ ಬದುಕನ್ನು ಉದ್ದೀಪಿಸುತ್ತದೆ. ಹೀಗಾಗಿ ಬಡತನ ಶಾಪವಲ್ಲ, ಅದೊಂದು ವರ.

ಬಡತನ ಶಾಪ ಅಂದುಕೊಂಡರೆ ಅದು ಶಾಪವಾಗಿಯೇ ಕಾಡುತ್ತೆ. ಬಡತನ ಭಗವಂತ ನಮಗೆ ಕೊಟ್ಟಿರುವ ಸವಾಲು ಅಂತ ಸ್ವೀಕರಿಸಿದರೆ ವರವಾಗುತ್ತೆ. ಬಡವನಿರಲಿ, ಶ್ರೀಮಂತನಿರಲಿ ಬದುಕಲು ಬೇಕಿರುವುದು ಛಲ. ನೋವನ್ನು ನುಂಗಿ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಛಲ ಹುಟ್ಟುವುದೇ ಬಡವರಲ್ಲಿ. ಎಲ್ಲಾ ಇದ್ದವನಿಗೆ ಏನೂ ಬೇಕೆನಿಸುವುದಿಲ್ಲ. ಬೇಕು ಎನ್ನುವ ಛಲವೇ ಬದುಕಿಗೆ ಬಲ. ಸಾಕು ಅನ್ನುವುದೇ ಬದುಕಿನ ದೌರ್ಬಲ್ಯ. ಹಸಿವು ಎಲ್ಲವನ್ನೂ ಕಲಿಸುತ್ತದೆ. ಅನ್ನ ಹುಟ್ಟಿಸುವುದರಿಂದ ಅದನ್ನು ಹಂಚುವವರೆಗೂ ಬದುಕಿನ ಪಾಠ ಕಲಿಸುತ್ತದೆ. ಇದರಿಂದಾಗಿಯೇ, ಬಡತನದಲ್ಲಿ ಬೆಳೆಯುವ ಮಕ್ಕಳು ಸಾಧನೆಯ ಶಿಖರದಲ್ಲಿ ಮಿಂಚುತ್ತಾರೆ. ಅದಕ್ಕೆ ಪೂರಕವಾದ ವಾತಾವರಣ ಮತ್ತು ಅವಕಾಶವನ್ನು ಸಮಾಜ ಕಲ್ಪಿಸಿಕೊಡಬೇಕಷ್ಟೆ.

ಬಹಳಷ್ಟು ಬಡಮಕ್ಕಳು ಬಡತನದ ಕೀಳರಿಮೆಯಿಂದಲೇ ಹಿಂದುಳಿಯುತ್ತಿದ್ದಾರೆ. ಇಂಥ ಮಕ್ಕಳಲ್ಲಿ ಆತ್ಮಬಲ ತುಂಬಿ ಬೆಳೆಸಿದರೆ ಈ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಡಬಲ್ಲರು. ಏಕೆಂದರೆ ಬಡ-ಮಧ್ಯಮ ವರ್ಗದ ಮಕ್ಕಳಿಂದಲೇ ನಮ್ಮ ದೇಶ ಒಂದಿಷ್ಟು ಸಾಧನೆ ಮಾಡುತ್ತಿದೆ. ಶ್ರೀಮಂತ ಮಕ್ಕಳಿಂದ ದೇಶದ ಪ್ರಗತಿಗೆ ನೀಡುತ್ತಿರುವ ಕಾಣಿಕೆ ಅತ್ಯಲ್ಪ. ಬಡಮಕ್ಕಳಲ್ಲಿ ಉತ್ತಮ ಬದುಕು ಕಟ್ಟಬೇಕೆಂಬ ತುಡಿತವಿರುತ್ತದೆ. ತುಡಿತದ ಒತ್ತಡ ಇದ್ದಾಗಷ್ಟೆ ಮನುಷ್ಯ ಮೇಲೇಳುತ್ತಾನೆ. ಸ್ಥಿತಿವಂತನಾಗಬೇಕೆಂಬ ಒತ್ತಡ ಬಡಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಏಕೆಂದರೆ, ಎಲ್ಲಿ ಕೊರತೆ ಇರುತ್ತದೋ, ಅಲ್ಲಿ ಒರತೆಗೆ ಕಿಚ್ಚು ಹಚ್ಚುತ್ತೆ.

ಪರಿಶ್ರಮದಿಂದಷ್ಟೇ ಸಾಧನೆ ಸಾಧ್ಯ ಅನ್ನೋದನ್ನ ವಿಜ್ಞಾನವೂ ಒಪ್ಪುತ್ತದೆ, ಧರ್ಮಜ್ಞಾನವೂ ಮನಗಾಣುತ್ತದೆ. ಕುಂತಲ್ಲೇ ಸುಖ ಬಯಸುವ ಶ್ರೀಮಂತರ ಮಕ್ಕಳಿಂದ ಸಾಧನೆ ನಿರೀಕ್ಷಿಸುವುದು ಹಾಸ್ಯಾಸ್ಪದ. ಕೂತುಣ್ಣುವವರಿಗೆ ರೋಗಬಾಧೆ ಹೆಚ್ಚುವಂತೆ, ಸುಖದಲ್ಲಿರುವವರಿಗೆ ಸೋಮಾರಿತನದ ಬಾಧೆ ಹೆಚ್ಚಿರುತ್ತದೆ. ಅದೇ ಹಸಿವಿದ್ದವನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೆಚ್ಚಿರುತ್ತದೆ. ಉಳಿ ಪೆಟ್ಟು ತಿಂದಷ್ಟು ಸುಂದರ ಮೂರ್ತಿಯಾಗುವಂತೆ, ಬಡತನದ ಬೇಗೆಯಲ್ಲಿ ಬೆಂದಷ್ಟು ಸಾಧನೆಯ ಅಂಚು ಹರಿತವಾಗಿರುತ್ತದೆ. ‘ಗುಡಿಸಲಲ್ಲಿ ಅರಳಿದ ಕಲೆ ಅರಮನೆಯಲ್ಲಿ ಅಳಿಯುತ್ತೆ’ ಅನ್ನೋ ಮಾತು ಅಕ್ಷರಶಃ ನಿಜ. ಎಲ್ಲಿ ಶ್ರೀಮಂತಿಕೆ ಇರುತ್ತೋ ಅಲ್ಲಿ ಸಾಧನೆ ಕ್ಷೀಣಿಸುತ್ತೆ. ಎಲ್ಲಿ ಬಡತನ ಇರುತ್ತೋ ಅಲ್ಲಿ ಪ್ರಗತಿಯ ಹೆಜ್ಜೆ ಕಾಣಿಸುತ್ತೆ. ಛಲ-ಬಲವುಳ್ಳ ಮಕ್ಕಳಿಗೆ ಹಣದ ಕಾರಣಕ್ಕಾಗಿ ವಿದ್ಯೆ ವಂಚಿಸಬಾರದು. ಹಣದ ಕೊರತೆಯಿಂದ ಬಡಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದು ದೇಶದ ಅಭಿವೃದ್ದಿಗೆ ಮಾರಕ. ಪ್ರತಿಭಾವಂತ ಮಕ್ಕಳನ್ನು ಪೋಷಿಸಿ ಬೆಳೆಸಿದಾಗಷ್ಟೆ ಸಾಧನೆಯ ಪೂರಕ ವಾತಾವರಣದಲ್ಲಿ ‘ಸಚ್ಚಿದಾನಂದ’ದ ಬದುಕು ಅನಾವರಣವಾಗುತ್ತದೆ.

Kalyana Kranti

ಕಲ್ಯಾಣಕ್ರಾಂತಿ ನಡೆದಾಗ ಸಾವಿರಾರು ಶರಣರ ಕಗ್ಗೊಲೆಗಳಾದವು


ಕಲ್ಯಾಣಕ್ರಾಂತಿ ನಡೆದಾಗ ಸಾವಿರಾರು ಶರಣರ ಕಗ್ಗೊಲೆಗಳಾದವು, ಶರಣರ ರಕ್ತ ಬೀದಿಬೀದಿಗಳಲ್ಲಿ ನೀರಿನಂತೆ ಹರಿಯಿತು. ಕನ್ನಡದ ಅತ್ಯಮೂಲ್ಯ ವಚನಸಾಹಿತ್ಯಗಳನ್ನ ಅಂದು ಅಮಾನುಶವಾಗಿ ಸುಟ್ಟು ಹಾಕಲಾಯಿತು.

ಹಾಗಿದ್ದರೆ ಕಲ್ಯಾಣಕ್ರಾಂತಿಗೆ ಮೂಲವಾದರೂ ಏನು?

ಬಸವಣ್ಣ ತನ್ನ ಅನುಭವಮಂಟಪದ ಮುಖಾಂತರ ವಿಚಾರಗೋಷ್ಠಿಗಳು ನಡೆಸುತ್ತಿದ್ದದ್ದು, ಎಲ್ಲಾ ಕಾಯಕ ಜಾತಿಗಳಿಗೂ ಇಷ್ಟಲಿಂಗದೀಕ್ಷೆ ಕೊಡುತ್ತಿದ್ದದ್ದು, ಬಸವಣ್ಣನ ಪ್ರತಿಪಾದಿಸುತ್ತಿದ್ದ ಸಮಾನತೆ, ಎಲ್ಲಾ ಕಾಯಕ ವರ್ಗಗಳು ಒಟ್ಟಿಗೆ ದಾಸೋಹ ಮಾಡುತ್ತಿದ್ದದ್ದು, ಜಾತಿ ವ್ಯವಸ್ಥೆಯ ವಿರುದದ್ದ ಹೋರಾಟ, ಬಾಯಿಲ್ಲದ ಕೆಳಕ್ಕೆ ತಳ್ಳಲ್ಪಟ್ಟ ಸಮುದಾಯಗಳೂ ಕೂಡ ವಚನಗಳನ್ನು ರಚಿಸುವಂತಾಗಿದ್ದು, ಇವ್ಯಾವು ಅಲ್ಲಿನ ಸಂಪ್ರದಾಯವಾದಿಗಳಿಗೆ, ಪುರೋಹಿತರಿಗೆ ಹಿಡಿಸುತ್ತಲೇ ಇರಲಿಲ್ಲ. ಈ ವಿಷಯದಲ್ಲೇ ಬಸವಣ್ಣನ ಮೇಲೆ ಅವರಿಗೆ ವಿಪರೀತವಾದ ದ್ವೇಷ, ಅಸೂಯೆ ಆವರಿಸಿಕೊಂಡಿತ್ತು.

ಆದರೆ ವಿಶ್ವಗುರು ಬಸವಣ್ಣನ ಮೇಲೆ ಬಿಜ್ಜಳನಿಗೆ ಅಪಾರ ನಂಬುಗೆಯಿತ್ತು. ಆದ್ದರಿಂದ ಈ ಪುರೋಹಿತಶಾಹಿಗಳಾರು ಬಹಿರಂಗವಾಗಿ ಅಲ್ಲಿಯವರೆಗೆ ಬಸವಣ್ಣನನ್ನ ದೊಡ್ಡ ಮಟ್ಟದಲ್ಲಿ ವಿರೋಧಿಸಿರಲಿಲ್ಲ.

ಇಂತಿಪ್ಪ ಕಲ್ಯಾಣದಲ್ಲಿ ನಡೆದ ಸಮಗಾರ(ಚಪ್ಪಲಿ ತಯಾರಿಸುವ ಮಾದಾರ ಸಮುದಾಯ) ಜಾತಿಯ ಹರಳಯ್ಯ, ಬ್ರಾಹ್ಮಣನಾಗಿದ್ದ ಮಧುವರಸನ ಮಕ್ಕಳ ವಿವಾಹವು ಕಲ್ಯಾಣಕ್ರಾಂತಿಗೆ ಕಾರಣವಾಯಿತು.

ಹರಳಯ್ಯ, ಮಧುವರಸ ಇಬ್ಬರೂ ಇಷ್ಟಲಿಂಗದೀಕ್ಷೆ ಪಡೆದಿದ್ದರು. ಮಧುವರಸನ ಮಗಳು ಲಾವಣ್ಯ, ಹರಳಯ್ಯನ ಮಗ ಶೀಲವಂತನ ವಿವಾಹವು ಪುರೋಹಿತಶಾಹಿಗಳ ವಿರೋಧದ ನಡುವೆಯೂ ನೆರವೇರಿತು.

ಆದರೆ ಪುರೋಹಿತಶಾಹಿಗಳು ತಮ್ಮ ಮಡಿವಂತಿಕೆ, ಸಂಪ್ರದಾಯಗಳ ವಿರುದ್ದವಾಗಿ ನಡೆದ ವರ್ಣಸಂಕರ ವಿವಾಹವನ್ನ ಹೇಗಾದರೂ ಸಹಿಸಿಯಾರು? ಕೀಳು ಜಾತಿಯ ಸಮಗಾರನಿಗೆ, ಬ್ರಾಹ್ಮಣ ಕನ್ಯೆಯನ್ನು ಕೊಟ್ಟು ಮದುವೆ ಮಾಡುವುದು ಅನುಲೋಮ ವಿವಾಹ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು ಇದು ಧರ್ಮಬಾಹಿರ ಎಂದು ಬಿಜ್ಜಳನಲ್ಲಿ ದೂರಿತ್ತರು.

ನಂತರ ಬಸವಣ್ಣನನ್ನು ರಾಜ್ಯದಿಂದ ಗಡಿಪಾರು ಮಾಡಿಸಲಾಯಿತು...

ಇತ್ತ ಹರಳಯ್ಯ, ಮಧುವರಸ, ಶೀಲವಂತನಿಗೆ ಎಳೆಹೂಟೆ ಶಿಕ್ಷೆ (ಮನುಷ್ಯರನ್ನ ಸರಪಳಿಗಳಲ್ಲಿ ಆನೆಗಳ ಕಾಲಿಗೆ ಕಟ್ಟಿ ಎಳೆಸುವುದು) ಎಳೆಸಿ ಅಮಾನವೀಯವಾಗಿ ಕೊಲ್ಲಲಾಯಿತು.

ನಂತರ ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಜ್ಜಳನ ಕೊಲೆಯಾಯಿತು. ನಂತರ ಬಿಜ್ಜಳನ ಸೈನ್ಯದ ತಲೆಕೆಡಿಸಿದ ಪುರೋಹಿತಶಾಹಿಗಳು ಶರಣರ ಕಗ್ಗೊಲೆಗಳಿಗೆ ಮುನ್ನುಡಿ ಬರೆದರು. ವಚನಕಾರರನ್ನ, ಶರಣರನ್ನ ಪ್ರಭುತ್ವ ವಿರೋಧಿಗಳೆಂದು ಅವರ ಮಾರಣಹೋಮ ನಡೆಸಲಾಯಿತು. ಸುಮಾರು ೧ಲಕ್ಷದ ೯೬ಸಾವಿರ ಶರಣರಿದ್ದ ಕಲ್ಯಾಣದಲ್ಲಿ, ಭಾಗಶಃ ಶರಣರನ್ನು ಕೊಲ್ಲಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು. ವಚನಕಾರರ ವಚನಗಳ ಕಟ್ಟುಗಳನ್ನು ಬೆಂಕಿಯಿಟ್ಟು ಸುಡಲಾಯಿತು. ಇದು ನಡೆದದ್ದು ಮಹಾನವಮಿಯಂದು. ಆನಂತರ ಉಳಿದ ವಚನಕಾರರು, ವಚನಗಳೊಂದಿಗೆ ಬೇರೆಡೆಗೆ ಪ್ರಯಾಣ ಬೆಳೆಸಿ, ಶರಣರ ವಚನಗಳನ್ನು, ಲಿಂಗಾಯತ ದೀಕ್ಷೆಯನ್ನು ನೀಡಿ ಲಿಂಗಾಯತ ಧರ್ಮವನ್ನ ಉಳಿಸಿದರು.

ಈ ಕೊಲೆಗಳಾವೂ ರಾಜ್ಯ ವಿಸ್ತರಿಸುವುದಕ್ಕೆ ನಡೆದ ಕೊಲೆಗಳಲ್ಲ, ಕೇವಲ ಪುರೋಹಿತಶಾಹಿಗಳ ಗೊಡ್ಡು ಸಂಪ್ರದಾಯ, ವರ್ಣಸಂಕರ, ಜಾತಿವ್ಯವಸ್ಥೆ ಮೀರಿದ್ದಕ್ಕಾಗಿ ನಡೆದ ಕೊಲೆಗಳಾಗಿದ್ದವು.

ಊರಿನೊಳಗೆ, ಗುಡಿಯೊಳಗೆ ಪ್ರವೇಶವಿರದಿದ್ದ ಶೂದ್ರರಿಗೆ ಅಂದು ಬಸವಣ್ಣ ಅಂಗೈಯಲ್ಲೇ ಲಿಂಗ ಕೊಟ್ಟು ಲಿಂಗಾಯತರನ್ನಾಗಿ ಮಾಡಿದ. ಇಂದು ಭಾಗಶಃ ಲಿಂಗಾಯತ ಯುವಕರಿಗೆ ಈ ಕಲ್ಯಾಣ ಕ್ರಾಂತಿಯ ಬಗ್ಗೆಯೇ ತಿಳಿದಿಲ್ಲ. ಅಂದು ಯಾರು ಬಸವಣ್ಣ, ವಚನಕಾರರನ್ನ ವಿರೋಧಿಸಿ ಲಕ್ಷಾಂತರ ಶರಣರನ್ನ ಕೊಂದರೋ ಇಂದು ಅಂತವರ ತಾಳಕ್ಕೆ ನಮ್ಮ ಹುಡುಗರೇ ಕುಣಿಯುತ್ತಿರೋದು ಈ ಕಾಲದ ಚೋದ್ಯ.

ಈ ರೀತಿ ಅಮಾನವೀಯವಾಗಿ ಶರಣರನ್ನ ಕೊಲೆಗೈದ ಪುರೋಹಿತಶಾಹಿಗಳು ಹೇಳುವ ಧರ್ಮವನ್ನ ಲಿಂಗಾಯತರು ಏತಕ್ಕಾಗಿ ಪಾಲಿಸಬೇಕು? ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಕಲ್ಯಾಣಕ್ರಾಂತಿ ಪುಸ್ತಕ ಸಿಗುತ್ತದೆ, ತಪ್ಪದೇ ಓದಿ.

ಇನ್ನೊಂದಷ್ಟು ವರುಷಗಳಾದ ಮೇಲೆ ಈ ಪುರೋಹಿತಶಾಹಿಗಳು ಲಿಂಗಾಯತ ಯುವಕರ ಮನಸ್ಸಿನಲ್ಲಿ ಬಸವಣ್ಣನೇ ಸರಿಯಿಲ್ಲ ಎನ್ನುವ ಮಟ್ಟಿಗೆ ವಿಷ ತುಂಬದಿದ್ದರೆ ಅದೇ ನಮ್ಮ ಅದೃಷ್ಟ.

Sunday, January 28, 2024

The Magical World called Mobile

ಮೊಬೈಲ್ ಎಂಬ ಮಾಯಾಲೋಕ;

ಸಂಬಂಧಗಳ ಕೊಂಡಿ ಕಳಚಿ ಕೊನೆಗೆ ದಕ್ಕಿದ್ದು ಏಕಾಂತ ಮಾತ್ರ!!


ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರ ಚೆನ್ನಾಗಿದೆ, ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ, ನನಗೆ ನೆಮ್ಮದಿ ಸಿಕ್ಕಿದೆ, ಮೊಬೈಲ್ ನಿಂದಲೇ ನಾನು ಅತೀ ಸಂತೋಷವಾಗಿದ್ದೇನೆ ಎಂದು ಹೇಳಲಿ ನೊಡೋಣ. ಹಾಸ್ಯಾಸ್ಪದ ಸಂಗತಿ ಏನೆಂದರೆ ನಾವು ನಮ್ಮ ಆಯುಷ್ಯವಿಡೀ ಸಂಬಂಧಿಗಳನ್ನು, ಗೆಳೆಯರನ್ನು, ಮನೆಯವರನ್ನು, ಸಂಗಾತಿಯನ್ನೂ ದೂರ ಮಾಡಿಕೊಳ್ಳುವಷ್ಟು ಮೊಬೈಲ್ ಹಿಂದೆ ಬಿದ್ದು ಆಟದಲ್ಲಿ ನಮ್ಮ ಸಂತೋಷ , ನೆಮ್ಮದಿ ಹುಡುಕುತ್ತಿರುತ್ತೇವೆ. ಆದರೆ ಕೊನೆಗೆ ನಮ್ಮ ಉಸಿರು ನಿಂತರೂ ಅದರಲ್ಲಿ ನಮ್ಮ ಆ ಹುಡುಕಾಟ ನಿಲ್ಲುವುದಿಲ್ಲ.

ಮೊಬೈಲ್... ಇದು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆಗ ತಾನೆ ಅಮ್ಮ ಎಂದು ಹೇಳಲು ಕಲಿತ ಮಗುವಿನಿಂದ ಹಿಡಿದು ಬಿಳಿ ಗಡ್ಡ ಬೆಳೆದ ಹಿರಿ ಜೀವದವರೆಗೂ ಎಲ್ಲರಿಗೂ ಬೇಕಾದ, ಅವಶ್ಯಕ ವಸ್ತು, ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಜೀವ, ಜೀವನದ ಪ್ರಮುಖ ಭಾಗವಾಗಿಯೇ ಬೆಸೆದುಕೊಂಡಿರುವ ಜಂಗಮ ಯಂತ್ರ ಮನುಷ್ಯನ ಎಲ್ಲ ಸಂಬಂಧಿಗಳಿಗಿಂತಲೂ ಶ್ರೇಷ್ಟ. ಆದರೂ ಮೊಬೈಲ್ ನ್ನು ನಮ್ಮ ಸುಖ, ದುಃಖಗಳಲ್ಲಿ ಭಾಗಿಯಾಗುವ ಉತ್ತಮ ಸಂಗಾತಿ, ನಂಬಿಕೆಯ ಗೆಳೆಯ, ಬೇಕಾದಾಗ ಸಲಹೆ ನೀಡುವ ಪಾಲಕನೆಂದೇ ಅಂದುಕೊಂಡಿರುವ ನಾವು ಅದೆಷ್ಟು ಮೂರ್ಖರಲ್ವಾ?

ಮೊಬೈಲ್ ಈ ಪ್ರಪಂಚಕ್ಕೆ ಬಂದ ಮೊದ ಮೊದಲು ನಾವೆಲ್ಲರೂ ಹೆಮ್ಮೆಯಿಂದ ಬೀಗಿದೆವು ಇನ್ನು ಮುಂದೆ ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿ ಇರುತ್ತೆ ಅಂತ. ಆದರೆ ಇಂದು ಆ ಮೊಬೈಲ್ ಅಂಗೈಯಲ್ಲಿ ನಾವೆಲ್ಲರೂ ಇರುವಂತಾಗಿದೆ. ಇದಕ್ಕೆಲ್ಲಾ ಮೊಬೈಲ್ ಅನ್ನೋ 'ಮಾಯಾವಿ'ಯನ್ನು ನಾವು ನಮ್ಮ ಬದುಕಿನೊಳಗೆ ಅತಿಯಾಗಿ ಬಿಟ್ಟುಕೊಂಡಿದ್ದೇ ಕಾರಣ. ಜಂಗಮವಾಣಿ ಇಂದು ಕೇವಲ ಫೋನ್ ಮಾಡಲು ಮತ್ತು ಮೆಸೆಜ್ ಮಾಡಲಷ್ಟೇ ಉಳಿದಿದ್ದರೆ ಬಹುಷಃ ಮೊಬೈಲ್ ಇಷ್ಟೊಂದು ನಶೆ ಆಗುತ್ತಿರಲಿಲ್ಲ. ಇದು ಮೊಬೈಲ್ ಮಾಡಬೇಕಾದ ಕೆಲಸವನ್ನಷ್ಟೇ ಮಾಡದೆ ಟಿವಿ, ರೇಡಿಯೋ, ಪುಸ್ತಕ, ಸುದ್ದಿ ಪತ್ರಿಕೆ ಹೀಗೆ ಅನೇಕ ವಸ್ತುವಿನ ಕೆಲಸವನ್ನು ಕಸಿದುಕೊಂಡು ಅವರ ಕೆಲಸವನ್ನೂ 'ಪಾರ್ಟ್ ಟೈಮ್ ' ಲೆಕ್ಕದಲ್ಲಿ ಮಾಡುತ್ತಿದೆ. ಇದು ಒಂದು ರೀತಿ ಒಳ್ಳೆಯದೇ.

ಯಾಕೆಂದರೆ ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಮೊಬೈಲ್ ಅನ್ನೋ ದೂರದ ಸಂಬಂಧಿಯನ್ನು ನಮ್ಮ ಅತೀ ಹತ್ತಿರದ ಸಂಬಂಧದ ಒಳಗೆ ಸೇರಿಸಿಕೊಂಡಿದ್ದು ಸರಿಯಾಗಿಯೇ ಇದೆ. ಆದರೆ ಆ ಸಂಬಂಧಿಯನ್ನು ನಾವು ಅತೀಯಾಗಿ ಅವಲಂಬಿಸಿ ಇಂದು ಅವನಿಲ್ಲದೆ ನಾವಿಲ್ಲ ಎನ್ನುವ ಸ್ಥಿತಿಗೆ ಬಂದು ತಲುಪಿದ್ದೇವೆ. ಎಷ್ಟರ ಮಟ್ಟಿಗೆ ಎಂದರೆ ಮೊಬೈಲ್ ಈ ಪ್ರಪಂಚಕ್ಕೆ ಕಾಲಿಡುವುದಕ್ಕಿಂತ ಮೊದಲು ನಮ್ಮ ಪೂರ್ವಜರು ಅದು ಹೇಗೆ ಬದುಕಿದರೋ ಎಂಬ ಅನುಮಾನ ಬರುವಷ್ಟು. ಹಾಗಿದ್ದರೆ ನಿಜವಾಗಿಯೂ ಈ ಮೊಬೈಲ್ ಬಳಕೆ ನಮ್ಮ ಜೀವನಕ್ಕೆ ಇಷ್ಟೊಂದು ಅವಶ್ಯಕತೆ ಇದೆಯಾ? ಇದನ್ನು ನಾವು ನಮ್ಮ ಬದುಕುವ ಅನಿವಾರ್ಯತೆ ಎಂದು ಭಾವಿಸಿಕೊಂಡು ಬದುಕುವುದರಲ್ಲಿ ಏನಾದರೂ ಅರ್ಥ ಇದೆಯಾ?

ಈಗ ಅದ್ಯಾವ ಮನೆಯಲ್ಲಾದರೂ ನೋಡಿ, ಅತ್ತೆ-ಸೊಸೆ ಜಗಳ, ಚಿಕ್ಕ ಮಕ್ಕಳ ಚೀರಾಟ, ಪಾಲಕರ ಕಿತ್ತಾಟ ಬಹಳ ಕಡಿಮೆ ಆಗಿ ಹೋಗಿದೆ. ಮೊದಲೆಲ್ಲಾ ಪಕ್ಕದ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಕೇಳಿಸಿಕೊಳ್ಳುವ ಕೆಟ್ಟ ಕುತೂಹಲ ಎಲ್ಲರಲ್ಲೂ ಇರುತ್ತಿತ್ತು. ಆದರೆ ಇಂದು ಪಕ್ಕದ ಮನೆಯವರ ಸುದ್ದಿ ಬಿಡಿ, ನಮ್ಮ ಪಕ್ಕಕ್ಕಿದ್ದವರ ಮಾರು ಕೇಳಿಸಿಕೊಳ್ಳುವುದೂ ನಮಗೆ ಬೇಕಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಎಷ್ಟು ಮಂದಿಇರುತ್ತಾರೋ ಅವರೆಲ್ಲರ ಬಳಿಯೂ ಒಂದೊಂದು ಮೊಬೈಲ್ ಇದ್ದೇ ಇರುತ್ತದೆ. ಯಾಕೆಂದರೆ ಬಿಡುವಿನ ಸಮಯದಲ್ಲಿ ಆ ಮೊಬೈಲ್ ಅವರ ಕೈಗೆ ಬಂದಾಗ ಒಬ್ಬೊಬ್ಬರದ್ದೂ ಒಂದೊಂದು ಪ್ರಪಂಚವಾಗಿರುತ್ತದೆ. ಅಂದು ಚಿಕ್ಕ ಮಕ್ಕಳು ಅಳದಂತೆ, ಕೀಟಲೆ ಮಾಡದಂತೆ ನೋಡಿಕೊಳ್ಳಲು ಮನೆವರೆಲ್ಲಾ ಒಟ್ಟಾಗುತ್ತಿದ್ದರು, ಅವರ ಜೊತೆ ನಲಿದು ಆ ಮಗುವಿನ ನಗುವಿಗೆ ಕಾರಣವಾಗುತ್ತಿದ್ದರು.

ಆದರೆ ಇಂದು ಯಾವ ಪಾಲಕರಿಗೂ ಅವರ ಮಕ್ಕಳನ್ನು ಸುಧಾರಿಸುವ ಸಹನೆ, ಸಮಯ ಎರಡೂ ಇಲ್ಲ. ತಮ್ಮ ಮಕ್ಕಳು ಅತ್ತರೆ ಸಾಕು ಆ ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಅದರಲ್ಲಿ ಕಾರ್ಟೂನ್ ಅಥವಾ ಇನ್ಯಾವುದೇ ಚಿಕ್ಕ ಮಕ್ಕಳಿಗೆ ಮನರಂಜನೆ ನೀಡುವ ವಿಡಿಯೋಗಳನ್ನು ಹಚ್ಚಿ ಅವರನ್ನು ಒಂದೆಡೆ ಕೂರಿಸಿ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಈಗಂತೂ ಶಾಲೆಗೆ ಹೋಗದೆ ಇರುವ ಮಕ್ಕಳೂ ಸಹ ತಿಂಡಿ, ತಿನಿಸುಗಳು, ಆಟಿಗೆ ಸಾಮಾನುಗಳು ಹಾಗೂ ಅಪ್ಪ, ಅಮ್ಮ ಬೇಕು ಎನ್ನುವುದಕ್ಕಿಂತ ಮೊಬೈಲ್ ಬೇಕು ಎಂಬ ಸಲುವಾಗಿಯೇ ರಂಪಾಟ ಮಾಡುವುದು ಹೆಚ್ಚು. ಕೊರೊನಾದಿಂದ ಆನ್ ಲೈನ್ ಕ್ಲಾಸ್ ಆರಂಭವಾದಾಗ ಪ್ರತೀ ವಿದ್ಯಾರ್ಥಿಗಳ ಕೈಯ್ಯಲ್ಲೂ ಬಂದ ಮೊಬೈಲ್ , ಈಗ ಶಾಲಾ ಕಾಲೇಜು ಆರಂಭವಾಗುತ್ತಿದ್ದಾಗಲೂ ಆ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ಮೊಬೈಲ್ ಲೋಕವೇ ಚೆನ್ನಾಗಿತ್ತು ಅನ್ನಿಸದೇ ಇರದು. ಯಾಕೆಂದರೆ, ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ, ಸಮಯಕ್ಕೆ ಸರಿಯಾಗಿ ಬಾರದ ಬಸ್ ಗೆ ಕಾದು, ಬೇಸಿಗೆ, ಮಳೆ, ಚಳಿಗಾಲವೆನ್ನದೆ ಶಾಲೆಗೆ ಹೋಗಿ, ಗಂಟೆಗಂಟ್ಟಲೇ ಒಂದೇ ಕೊಠಡಿಯಲ್ಲಿ ಕಲಿಸುವ ಅಧ್ಯಾಪಕರುಗಳು ಮತ್ತು ಎಂಟೊಂಭತ್ತು ತಾಸು ಅದೇ ನಾಲ್ಕು ಗೋಡೆಯ ಮಧ್ಯೆ ಕೂರುವ ವಿದ್ಯಾರ್ಥಿಗಳಿಗೆ ಮೊಬೈಲ್ ನಲ್ಲೇ ಶಾಲೆ ಮುಂದುವರೆದರೆ ಬಹಳ ಒಳ್ಳೆಯದು. ಆನ್ ಲೈನ್ ಕ್ಲಾಸ್ ನಲ್ಲಾದರೆ ನಾಲ್ಕೈದು ತಾಸು ಒಂದೇ ಕಡೆ ಕೂರಲೇ ಬೇಕೆಂದೇನಿಲ್ಲ, ಬೆಳಿಗ್ಗೆ ಬೇಗನೇ ಏಳಬೇಕಿಲ್ಲ, ಬಸ್ ಹಿಡಿಯುವ ಜಂಜಾಟವಿಲ್ಲ. ಹೀಗಾಗಿ ಶಾಲೆ ಆರಂಭವಾದರೂ ಇನ್ನೂ ಅವರು ಆನ್ ಲೈನ್ ಕ್ಲಾಸಿನ ಮೂಡಲ್ಲೇ ಇರುವುದು ದೊಡ್ಡ ವಿಷಯವೇನಲ್ಲ.

ಬದಲಾದ ಜಗತ್ತಿನಲ್ಲಿ ನಾವು ಇತರರೊಂದಿಗೆ ಸರಿಸಮಾನವಾಗಿ ಹೊಂದಿಕೊಂಡು ಬದುಕಬೇಕಾದರೆ ನಾವು ಸ್ವಲ್ಪವಾದರೂ ಆಧುನಿಕರಾಗುವುದು ಅನಿವಾರ್ಯ. ಆದರೆ ಹೊರಗಿನ ಪ್ರಪಂಚವನ್ನೇ ನೋಡಿರದ ಆ ಪುಟ್ಟ ಕಂದಮ್ಮಗಳಿಗೆಲ್ಲಾ ಮೊಬೈಲ್ ನೀಡುವಷ್ಟು ನಾವು ಆಧುನಿಕರಾಗಬಾರದು. ಯಾಕೆಂದರೆ ಚಿಕ್ಕ ಮಕ್ಕಳು ದೊಡ್ಡವರಾಗಿ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಅವರು ಮೊದಲು ಬೀಳುವುದನ್ನು ಅಂದರೆ ಸೋಲುವುದನ್ನು ಕಲಿಯಬೇಕು. ಆಗ ಮಾತ್ರ ಅವರಿಗೆ ಗೆಲುವಿನ ನಿಜವಾದ ಮಹತ್ವ ಅರಿವಾಗುತ್ತದೆ.

ಮೊಬೈಲ್ ಚಟ ಜಾಸ್ತಿ ಆದರೆ, ಕೊನೆಗೆ ದೇವರೇ ಗತಿ!!

ಆದರೆ ಇಂದು ಮಕ್ಕಳ ಕೈಯಲ್ಲಿ ಮೊಬೈಲ್ ಬಂದಾಗಿನಿಂದ ಅವರಿಗೆ ಹೊರಗಿನ ಆಟ ಬೇಕಾಗಿಲ್ಲ, ಮೊಬೈಲ್ ನಲ್ಲೇ ಹತ್ತಾರು ಗೇಮ್ಸ್ ಆಡಿಕೊಂಡು ಕಾಲ ಕಳಿಯುತ್ತಿರುತ್ತಾರೆ. ಹೀಗಾಗಿ ಅವರಿಗೆ ಬೀಳು (ಸೋಲು)ವ ಅನಿವಾರ್ಯತೆಯೇ ಇರುವುದಿಲ್ಲ. ಮೊಬೈಲ್ ನಲ್ಲಿ ಆಟ ಆಡುವುದಕ್ಕೂ ಹಾಗೂ ಹೊರಗಡೆ ನಾಲ್ಕು ಜನರ ಜೊತೆ ಆಟ ಆಡುವುದಕ್ಕೂ ಇರುವ ವ್ಯತ್ಯಾಸ ಇಷ್ಟೆ- ಹೊರಗಡೆ ನಾಲ್ಕು ಜನರೊಂದಿಗೆ ಆಟ ಆಡಿದಾಗ ಚಿಕ್ಕವರಿದ್ದಾಗಲೇ ನಮಗೆ ಸಮಾಜ ಹೇಗೆ, ಬೇರೆ ವ್ಯಕ್ತಿಗಳ ಜೊತೆ ಮಾತನಾಡುವುದು ಮತ್ತು ಸಂಬಂಧ ಗಟ್ಟಿಗೊಳಿಸಿಕೊಳ್ಳುವುದು ಹೇಗೆ ಎಂದು ಅರಿವಾಗುತ್ತದೆ. ಅಲ್ಲದೆ ಅವರಿಂದ ನಾವು ಕಲಿಯುವ, ಕಲಿತ ಪಾಠಗಳು ಮಂದಿನ ನಮ್ಮ ಜೀವನಕ್ಕೆ ಒಂದೊಳ್ಳೆ ಗೆಳೆಯನಾಗಿ ನಮ್ಮ ಜೊತೆಗಿರುತ್ತದೆ.

ಅದೆಲ್ಲವುಗಳಿಗಿಂತ ಮುಖ್ಯವೇನೆಂದರೆ ಹೊರಗಡೆ ಆಟದಲ್ಲಿ ನಾವು ಭಾಗವಹಿಸಿದಾಗ ನಾವು ಎಷ್ಟು ಬಾರಿ ಸೋತರೂ ನಮಗೆ ಆಡಲು ಮತ್ತೊಂದು ಅವಕಾಶ ದೊರೆಯುತ್ತದೆ. ಆಗ ನಮಗೆ ಸೋಲು ಅಂದರೆ ಭಯ ಕಡಿಮೆ, ಗೆಲುವು ಅಂದರೆ ಹೆಮ್ಮೆ ಕಡಿಮೆ ಆಗುತ್ತದೆ. ಇದರಿಂದ ನಾವು ಒಂದೊಳ್ಳೆ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ. ಆದರೆ ಮೊಬೈಲ್ ನಲ್ಲಿ ಆಟ ಆಡುವವರಿಗೆ ಸಮಾಜದ ಜ್ಞಾನ ಸಿಗುವುದಿಲ್ಲ, ಯಾರ ಸಂಬಂಧಗಳೂ ಬೇಕಾಗುವುದಿಲ್ಲ. ಇದಲ್ಲದೆ ಮೊಬೈಲ್ ನಲ್ಲಿ ಆಟ ಸೋತರೆ 'ಗೇಮ್ ಓವರ್' ಅಲ್ಲಾ? ಹಾಗಾಗಿ ಅವರಿಗೆ ಆಟ ಎಷ್ಟು ಮುಖ್ಯವೋ ತಾವು ಗೆಲ್ಲುವುದೂ ಅಷ್ಟೇ ಮುಖ್ಯ. ಸೋಲು ಅನ್ನುವ ಆಯ್ಕೆಯೇ ಅವರಲ್ಲಿಲ್ಲ. ಆದರೆ ನಾವು ಸೋತುಬಿಡುತ್ತೇವೆ ಎಂಬ ಭಯ ಅವರು ಮಾಡುವ ಪ್ರತಿಯೊಂದು 'ಮೂವ್ಸ್ 'ನಲ್ಲೂ ಖಂಡಿತಾ ಇರುತ್ತದೆ. ಅದು ಅವರು ಆಟದಲ್ಲಿ ಇಡುವ ಮೂವ್ಸ್ ಆಗಿರಬಹುದು ಅಥವಾ ಜೀವನದಲ್ಲಿ ಇಡುವ ದೊಡ್ಡ ಹೆಜ್ಜೆಯ ಮೂವ್ಸೇ ಆಗಿರಬಹುದು. ಒಟ್ಟಿನಲ್ಲಿ ಮೊಬೈಲ್ ಕಾಲ ಆರಂಭವಾದಾಗಿನಿಂದ ಸೋಲು ಯಾರಿಗೂ ಬೇಡವಾಗಿದೆ. ಹೀಗಾಗಿಯೇ ಗೆಲುವಿಗೂ ಕೂಡ ನಾವ್ಯಾರೂ ಬೇಡವೇ ಆಗಿದ್ದೇವೆ. ನೀವ್ಯಾರೇ ಯಶಸ್ಸು ವ್ಯಕ್ತಿಗಳ ಕೇಳಿ ನೋಡಿ ಅವರಲ್ಲಿ ಒಬ್ಬರಾದರೂ ನನ್ನ ಯಶಸ್ಸಿಗೆ ಮೊಬೈಲ್ ಕಾರಣ ಎದಿದ್ದಾರಾ? ಅಥವಾ ಅನ್ನುತ್ತಾರಾ? ಎಂದು.

ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರ ಚೆನ್ನಾಗಿದೆ, ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ, ನನಗೆ ನೆಮ್ಮದಿ ಸಿಕ್ಕಿದೆ, ಮೊಬೈಲ್ ನಿಂದಲೇ ನಾನು ಅತೀ ಸಂತೋಷವಾಗಿದ್ದೇನೆ ಎಂದು ಹೇಳಲಿ ನೊಡೋಣ. ಹಾಸ್ಯಾಸ್ಪದ ಸಂಗತಿ ಏನೆಂದರೆ ನಾವು ನಮ್ಮ ಆಯುಷ್ಯವಿಡೀ ಸಂಬಂಧಿಗಳನ್ನು, ಗೆಳೆಯರನ್ನು, ಮನೆಯವರನ್ನು, ಸಂಗಾತಿಯನ್ನೂ ದೂರ ಮಾಡಿಕೊಳ್ಳುವಷ್ಟು ಮೊಬೈಲ್ ಹಿಂದೆ ಬಿದ್ದು ಆಟದಲ್ಲಿ ನಮ್ಮ ಸಂತೋಷ , ನೆಮ್ಮದಿ ಹುಡುಕುತ್ತಿರುತ್ತೇವೆ. ಆದರೆ ಕೊನೆಗೆ ನಮ್ಮ ಉಸಿರು ನಿಂತರೂ ಅದರಲ್ಲಿ ನಮ್ಮ ಆ ಹುಡುಕಾಟ ನಿಲ್ಲುವುದಿಲ್ಲ. ಆದರೂ ನಮ್ಮ ಕೈ ರೇಖೆ ಒಳಗೆ ಅವಿತು ಹೋಗುವಷ್ಟರ ಮಟ್ಟಿಗೆ ಮೊಬೈಲ್ ಅನ್ನೋ ನಮ್ಮ ಆತ್ಮಮಿತ್ರ ನಮ್ಮ ಕೈಯ್ಯಲ್ಲೇ ಇರಬೇಕು.

ಇಂದು ಇಡೀ ಪ್ರಪಂಚದಲ್ಲಿ ತಮ್ಮ ಮೊಬೈಲ್ ನ್ನು ಕಿಸೆಯಲ್ಲಿಟ್ಟುಕೊಂಡು ನಿರಂತರವಾಗಿ ಒಂದು ಹತ್ತು ನಿಮಿಷ ನೆಮ್ಮದಿಯಿಂದ ಇರುವ ಮಹಾನುಭಾವರಿಲ್ಲ. ಹಾಗೇನಾದರೂ ಇದ್ದರೆ ಅವರು ಈ ಗೃಹದವರೇ ಅಲ್ಲ. ಮೊಬೈಲ್ ನ ಅತೀಯಾದ ಬಳಕೆ ಇನ್ನೂ ಅತಿಯಾದರೆ, ಅದರಲ್ಲೂ ಹೀಗೆಯೇ ಮುಂದುವರೆದರೂ ಸಾಕು ನಾವು ಹೊರಗಿನ ಪ್ರಪಂಚವನ್ನು ಸಂಪೂರ್ಣವಾಗಿ ಮರೆತು 'ಏಲಿಯನ್ಸ್ ' ಗಳಂತೆ ಆಗುವ ಕಾಲ ಬಹಳ ದೂರವಿಲ್ಲ. ಇನ್ನು ಅಲೆಗಳ ಮೇಲೆ ಅಲೆಗಳನ್ನು ಎಬ್ಬಿಸುತ್ತಿರುವ ಕೊರೊನಾ ಉಪಟಳದಿಂದ ಮತ್ತೂ ಮೊಬೈಲ್ ಗೆ ಅಂಟಿಕೊಂಡಿರುವ ನಾವು ಇತರರ ಜೊತೆ ಬೆರೆಯುವುದನ್ನೇ ಸಂಪೂರ್ಣ ಮರೆತುಹೋಗಿದ್ದೇವೆ. ಇನ್ನು ಪಾಪ ಮನೆಯಲ್ಲಿರುವ ವೃದ್ಧರ ಪಾಡಂತೂ ಕೇಳೋದೇ ಬೇಡ. ತಮ್ಮ ಜೊತೆ ಮಾತನಾಡುವವರೂ ಸಿಗದೆ, ತಮ್ಮ ಮಕ್ಕಳು, ಮೊಮ್ಮಕ್ಕಳಂತೆ ಮೊಬೈಲ್ ಉಪಯೋಗಿಸಲೂ ಬಾರದೆ, ಬಂದರೂ ಉಪಯೋಗಿಸುವ ಮನಸ್ಸಿಲ್ಲದೆ ಏಕಾಂತ ಭಾವದೊಂದಿಗೆ ಬದುಕಿ ಬದುಕಿ ಸಾಕಾಗಿ ತಮ್ಮ ಕೊನೆ ದಿನದ ಲೆಕ್ಕಾಚಾರ ಹಾಕುತ್ತಿರುತ್ತಾರೆ.

ಮೊಬೈಲ್ ನಮಗೆ ನಿಜವಾಗಿಯೂ ಉತ್ತಮ ಗೆಳೆಯನಾಗಬಲ್ಲ. ಯಾವಾಗೆಂದರೆ- ನಾವು ಮೊಬೈಲ್ ನ್ನು ನಮ್ಮ ದುಡಿಮೆಗೆ ಮತ್ತು ಲಾಭಕ್ಕಷ್ಟೇ ಉಪಯೋಗಿಸಿ, ನಮ್ಮ ಒತ್ತಡದ ಜೀವನದ ನಡುವೆ ಸಿಕ್ಕ ಸ್ವಲ್ಪ ಸಮಯವನ್ನು ನಮ್ಮವರಿಗೋಸ್ಕರ ಮೀಸಲಿಟ್ಟು, ಜೀವನವನ್ನು ಸಮಾಜದೊಂದಿಗೆ ಬೆರೆಸಿ ನಮ್ಮಿಂದ ನಾಲ್ಕು ಜನಕ್ಕೆ ಉಪಯೋಗವಾಗುವಂತೆ ಬದುಕಿದಾಗ ಮಾತ್ರ. ಅದು ಬಿಟ್ಟು, ಮೊಬೈಲ್ ? ನಶೆ ಹತ್ತಿಸಿಕೊಂಡು ಅದೇ ಸರ್ವಸ್ವ ಎಂದು ಭಾವಿಸಿ ಬದುಕಿದರೆ ಕೊನೆವರೆಗೂ ನಮಗೆ ಸಿಗುವುದು, ನಮ್ಮಿಂದ ಉಳಿದವರಿಗೆ ದೊರೆಯುವುದು ಕೇವಲ ಏಕಾಂತ ಮಾತ್ರ.

ಸಂಬಂಧಗಳ ಯುಗ


ಇದು SSLC ವರೆಗೆ ಒಂದೇ ಶಾಲೆಯಲ್ಲಿ ಓದಿದ ನಾಲ್ವರು ಆತ್ಮೀಯ ಸ್ನೇಹಿತರ ಕಥೆ.

ಆಗ ನಗರದಲ್ಲಿ ಒಂದೇ ಒಂದು ಐಷಾರಾಮಿ ಹೋಟೆಲ್ ಇತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಆ ಹೋಟೆಲ್‌ಗೆ ಹೋಗಿ ಚಹಾ ಮತ್ತು ತಿಂಡಿ ತಿನ್ನೋಣ ಎಂದು ನಿರ್ಧರಿಸಿದರು. ನಾಲ್ವರಿಂದ ನಲವತ್ತು ರೂಪಾಯಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅದೊಂದು ಭಾನುವಾರವಾದ್ದರಿಂದ ನಾಲ್ವರೂ ಸೈಕಲ್ ಹತ್ತಿ ಹತ್ತೂವರೆ ಗಂಟೆಗೆ ಹೋಟೆಲ್ ತಲುಪಿದರು.

ದಿನೇಶ್, ಸಂತೋಷ್, ಮನೀಶ್ ಮತ್ತು ಪ್ರವೀಣ್ ತಿಂಡಿ ಮತ್ತು ಚಹಾ ಸೇವಿಸುತ್ತಾ ಮಾತನಾಡತೊಡಗಿದರು. ನಾಲ್ವರೂ ೪೦ ವರ್ಷಗಳ ನಂತರ ಅದೇ ಹೋಟೆಲ್‌ನಲ್ಲಿ ಏಪ್ರಿಲ್ ೧ ರಂದು ಮತ್ತೆ ಭೇಟಿಯಾಗಲು ಸರ್ವಾನುಮತದಿಂದ ನಿರ್ಧರಿಸಿದರು.

ಅಲ್ಲಿಯವರೆಗೆ ನಾವೆಲ್ಲರೂ ತುಂಬಾ ಶ್ರಮಿಸಬೇಕು, ೪೦ ವರ್ಷಗಳ ನಂತರ ಎಷ್ಟು ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ ಎಂದು ಅವರು ಚರ್ಚಿಸಿದರು.

ಅಂದು ಕೊನೆಯವನಾಗಿ  ಹೋಟೆಲ್ ತಲುಪುವವನು  ಆ ದಿನದ ಬಿಲ್ ನ್ನು ಪಾವತಿಸಬೇಕು ಎಂದು ನಿರ್ಧರಿಸಿದರು.     

ಇವರಿಗೆ ಟೀ, ತಿಂಡಿ ಬಡಿಸಿದ ಮಾಣಿ ಕಾಳು ಇದನ್ನೆಲ್ಲ ಕೇಳುತ್ತಿದ್ದ. ಅಲ್ಲಿಯವರೆಗೆ ಇಲ್ಲೇ ಇದ್ದರೆ ನಿಮ್ಮೆಲ್ಲರಿಗಾಗಿ ನಾನು ಕಾಯುತ್ತಿರುತ್ತೇನೆ ಎಂದರು.

ಮುಂದಿನ ಶಿಕ್ಷಣಕ್ಕಾಗಿ ನಾಲ್ವರೂ ಬೇರೆಯಾದರು.   

ದಿನೇಶ್ ತನ್ನ ತಂದೆ ಸ್ಥಳಾಂತರಗೊಂಡ ನಂತರ ನಗರವನ್ನು ತೊರೆದಿದ್ದರು, ಸಂತೋಷ್ ಹೆಚ್ಚಿನ ಅಧ್ಯಯನಕ್ಕಾಗಿ ತನ್ನ ಚಿಕ್ಕಪ್ಪನ ಬಳಿಗೆ ಹೋದರು.   ಮನೀಶ್ ಮತ್ತು ಪ್ರವೀಣ್ ನಗರದ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದರು.

ಕೊನೆಗೆ ಮನೀಶ್ ಕೂಡ ಊರು ಬಿಟ್ಟರು.     

ದಿನಗಳು, ತಿಂಗಳುಗಳು ಮತ್ತು ವರ್ಷಗಳು ಕಳೆದವು.  

ನಲವತ್ತು ವರ್ಷಗಳಲ್ಲಿ, ನಗರವು ಅಮೂಲಾಗ್ರ ಬದಲಾವಣೆಗೆ ಒಳಗಾಯಿತು. ನಗರದ ಜನಸಂಖ್ಯೆಯು ಹೆಚ್ಚಾಯಿತು ಮತ್ತು ರಸ್ತೆಗಳು, ಮೇಲ್ಸೇತುವೆಗಳು ಮತ್ತು ಮಾಲ್‌ಗಳು ನಗರದ ನೋಟವನ್ನು ಬದಲಾಯಿಸಿದವು.

ಈಗ ಆ ಹೋಟೆಲ್ ಪಂಚತಾರಾ ಹೋಟೆಲ್ ಆಗಿ ಮಾರ್ಪಟ್ಟಿತ್ತು, ಮಾಣಿ ಕಾಳು ಈಗ ಈ ಹೋಟೆಲ್ ನ ಮಾಲೀಕ ಶ್ರೀ ಕಾಳು ಆಗಿಬಿಟ್ಟಿದ್ದ.      

ನಲವತ್ತು ವರ್ಷಗಳ ನಂತರ, ನಿಗದಿತ ದಿನಾಂಕವಾದ ಏಪ್ರಿಲ್ ೧ ರಂದು, ಮಧ್ಯಾಹ್ನ, ಐಷಾರಾಮಿ ಕಾರೊಂದು ಹೋಟೆಲ್‌ನ ಬಾಗಿಲಿಗೆ ಬಂದಿತು.

ದಿನೇಶ್ ಕಾರಿನಿಂದ ಇಳಿದು ವರಾಂಡದತ್ತ ನಡೆಯತೊಡಗಿದ. ಅವರು ಈಗ ಮೂರು ಆಭರಣ ಶೋರೂಮ್‌ಗಳನ್ನು ಹೊಂದಿದ್ದರು.

ದಿನೇಶ ಹೊಟೇಲ್ ಮಾಲಕ ಶ್ರೀ ಕಾಳು ಬಳಿಗೆ ಬಂದರು, ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಶ್ರೀ ಕಾಳು ಹೇಳಿದರು, "ಪ್ರವೀಣ್ ಸರ್, ನಿಮಗಾಗಿ ಒಂದು ತಿಂಗಳ ಹಿಂದೆನೇ  ಟೇಬಲ್ ಕಾಯ್ದಿರಿಸಿದ್ದರು."

ನಾಲ್ವರಲ್ಲಿ ತಾನು ಮೊದಲಿಗನೆಂದು ದಿನೇಶನಿಗೆ ಮನಸಾರೆ ಸಂತೋಷವಾಯಿತು.  ಈ  ದಿನ ತಾನು ಬಿಲ್ ಕಟ್ಟಬೇಕಿಲ್ಲ.  ಅದಕ್ಕಾಗಿ ಗೆಳೆಯರನ್ನು ಗೇಲಿ ಮಾಡುತ್ತಿದ್ದ.

ಸ್ವಲ್ಪ ಹೊತ್ತಿನ ನಂತರ ಸಂತೋಷ್ ಬಂದ. ಸಂತೋಷ್ ನಗರದ ದೊಡ್ಡ ಬಿಲ್ಡರ್ ಆಗಿದ್ದರು. ಅವರ ವಯಸ್ಸಿಗೆ, ಅವರು ಈಗ ವಯಸ್ಸಾದ ಹಿರಿಯ ನಾಗರಿಕರಂತೆ ಕಾಣುತ್ತಿದ್ದರು.

ಈಗ, ಇಬ್ಬರೂ ಮಾತನಾಡುತ್ತ  ತಮ್ಮ

ಇತರ ಸ್ನೇಹಿತರಿಗಾಗಿ ಕಾಯತೊಡಗಿದರು.

ಮೂರನೇ ಗೆಳೆಯ ಮನೀಶ್ ಕೂಡ ಅರ್ಧ ಗಂಟೆಯಲ್ಲಿ ಬಂದ. ಅವನೊಂದಿಗೆ ಮಾತನಾಡಿದಾಗ, ಮನೀಷ್ ಈಗ ಉದ್ಯಮಿ ಎಂಬುದು ಇಬ್ಬರಿಗೂ ತಿಳಿಯಿತು.

ಪ್ರವೀಣ್ ಯಾವಾಗ ಬರುತ್ತಾನೆ ಎಂದು ಆ ಮೂವರು ಗೆಳೆಯರು ಮತ್ತೆ ಮತ್ತೆ ಬಾಗಿಲ ಕಡೆ ನೋಡುತ್ತಿದ್ದರು.

ಆಗ, ಶ್ರೀ ಕಾಳು ಅವರ ಬಳಿಗೆ ಬಂದು, "ಪ್ರವೀಣ್ ಸರ್ ಅವರಿಂದ ಒಂದು ಸಂದೇಶ ಬಂದಿದೆ, ಅವರು ತಿಂಡಿಗಳೊಂದಿಗೆ ತಮ್ಮ ಸಂತೋಷಕೂಟ  ಪ್ರಾರಂಭಿಸಲು ನಿಮ್ಮೆಲ್ಲರನ್ನು ಕೇಳಿಕೊಂಡಿದ್ದಾರೆ.  

ಸ್ವಲ್ಪೇ ಸಮಯದಲ್ಲಿ ಅವರು ನಿಮ್ಮೊಂದಿಗೆ ಸೇರಿಕೊಳ್ಳುತ್ತಾರೆ" ಎಂದು ಹೇಳಿದರು.

ಮೂವರೂ ನಲವತ್ತು ವರ್ಷಗಳ ನಂತರ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಗಂಟೆಗಟ್ಟಲೆ ನಗುತ್ತಾ ತಮಾಷೆ ಮಾಡುತ್ತಾ ಖುಷಿಪಡುತ್ತಾ ಇದ್ದರು. ತುಂಬ ಸಮಯವಾದರೂ ಪ್ರವೀಣ್ ರವರು ಬರಲಿಲ್ಲ.

ಶ್ರೀ ಕಾಳು, "ಪ್ರವೀಣ್ ಸರ್ ಇನ್ನೊಂದು ಸಂದೇಶ ಕಳುಹಿಸಿದ್ದಾರೆ. "ನೀವು ಇಲ್ಲಿಯ ಮೂರೂ ಮೆನುಗಳಲ್ಲಿರುವ ನಿಮ್ಮ ಮೆಚ್ಚಿನ ತಿನಿಸುಗಳನ್ನು ಆರ್ಡರ್ ಮಾಡಿ,  ಊಟ  ಪ್ರಾರಂಭಿಸಲು ವಿನಂತಿಸಿದ್ದಾರೆ."

ಫುಡ್ ಆರ್ಡರ್ ಮಾಡಿದ್ರು. ತಿಂದು ಮುಗಿಸಿದರೂ ಪ್ರವೀಣ್ ಬರಲಿಲ್ಲ. ಮೂವರು ಬಿಲ್ ಕೇಳಿದಾಗ ಆನ್‌ಲೈನ್‌ನಲ್ಲಿ ಬಿಲ್ ಪಾವತಿ ಮಾಡಲಾಗಿದೆ ಎಂದು ಶ್ರೀ ಕಾಳುರವರು  ತಿಳಿಸಿದರು. ಇವರಿಗೆ ಅತಿ ಆಶ್ಚರ್ಯವಾಗಿತ್ತು.

ರಾತ್ರಿ ಎಂಟು ಗಂಟೆಗೆ ಒಬ್ಬ ಯುವಕ ಕಾರಿನಿಂದ ಇಳಿದು ಭಾರವಾದ ಹೃದಯದಿಂದ  ಆಗಮಿಸಿದರು. ಹೋಟೆಲ್‌ನಿಂದ ಹೊರಡಲು ತಯಾರಾದ ಆ ಮೂವರು ಸ್ನೇಹಿತರನ್ನು ಸಂಪರ್ಕಿಸಿದರು. ಆ ಮೂವರಿಗೂ  ಈ ವ್ಯಕ್ತಿಯಿಂದ ಕಣ್ಣು ತೆಗೆಯಲಾಗಲಿಲ್ಲ.

ಯುವಕ, "ನಾನು ನಿಮ್ಮ  ಸ್ನೇಹಿತನ ಮಗ ರವಿ. ನನ್ನ ತಂದೆಯ ಹೆಸರು ಪ್ರವೀಣ್, ಇಂದಿನ ನಿಮ್ಮ ಗೆಟ್ ಟುಗೆದರ್ ಬಗ್ಗೆ ಅಪ್ಪ ಹೇಳಿದ್ದರು.  

ಅವರು ಈ ದಿನಕ್ಕಾಗಿಯೇ ನಿರೀಕ್ಷೆ ಮಾಡುತ್ತಲೇ ಇದ್ದರು. ಆದರೆ, ನನ್ನ ದುರ್ದೈವ! ತೀವ್ರ ಅನಾರೋಗ್ಯದಿಂದ ಅವರು ಕಳೆದ ತಿಂಗಳು ನಿಧನರಾದರು.

ಇಂದು ನಾನು ಬೇಗ ಬಂದಿದ್ದರೆ ನಿಮಗೆಲ್ಲ ಬೇಸರವಾಗುತ್ತದೆ ಎಂದು ತಡವಾಗಿ ನನಗೆ ಬರಲು ತಿಳಿಸಿದ್ದರು. ‘ನನ್ನ ಗೆಳೆಯರಿಗೆ' ನಾನು ಈ ಲೋಕದಲ್ಲಿಲ್ಲ' ಎಂಬ ವಿಚಾರ ತಿಳಿದರೆ ಅವರು ಖಂಡಿತವಾಗಿಯೂ ನಗುವುದಿಲ್ಲ. 

ಆಗ ಒಬ್ಬರನ್ನೊಬ್ಬರು ಭೇಟಿಯಾದ ಖುಷಿಯನ್ನೇ  ಕಳೆದುಕೊಳ್ಳುತ್ತಾರೆ. ಅದು ನನಗೆ ಇಷ್ಟವಿಲ್ಲ. ಅವರೆಲ್ಲ ಸದಾಕಾಲ ಖುಷಿಯಿಂದ ಇರಬೇಕೆಂಬುದೇ ನನ್ನ ಆಸೆ" ಎಂದು ಅಪ್ಪ ಹೇಳಿದ್ದರು.

ಅದಕ್ಕೇ ನನಗೆ ಇಲ್ಲಿಗೆ ತಡವಾಗಿ ಹೋಗುವಂತೆ ಆದೇಶಿಸಿದ್ದರು. "ತನ್ನ ಪರವಾಗಿ ಎಲ್ಲರನ್ನೂ ಪ್ರೀತಿ, ಗೌರವದಿಂದ ತಬ್ಬಿಕೋ" ಎಂದೂ ನನಗೆ ಸೂಚನೆ  ನೀಡಿದ್ದರು". ಹೀಗೆ  ಹೇಳುತ್ತ, ರವಿ  ಹರ್ಷಾಶ್ರುಗಳೊಂದಿಗೆ ತನ್ನೆರಡೂ ಬಾಹುಗಳನ್ನು  ಅಗಲಿಸಿ ಅವರನ್ನು ಆಲಂಗಿಸಲು ಮುಂದಾದನು.

    ಸುತ್ತಮುತ್ತಲಿನವರೆಲ್ಲರೂ ಈ ದೃಶ್ಯವನ್ನು ಕುತೂಹಲದಿಂದ ನೋಡುತ್ತಿದ್ದರು.  ಅವರಿಗೆ  'ಈ ಯುವಕನನ್ನು ಎಲ್ಲೋ ನೋಡಿದ್ದೇವೆ' ಎಂದು  ಅನಿಸತೊಡಗಿತ್ತು.     

ಆಗ ರವಿಯವರೇ ಅವರ ಸಂಶಯ ನಿವಾರಣೆಗೆ  ಮುಂದಾದರು. ‘ನನ್ನ ತಂದೆ ಶಿಕ್ಷಕರಾಗಿದ್ದರು. ಕಲೆಕ್ಟರ್ ಆಗಲು ಅಗತ್ಯವಿರುವ ಒಳ್ಳೆಯ ಶಿಕ್ಷಣವನ್ನು ನನಗೆ ನೀಡಿದರು.  ಇಂದು ನಾನು ಈ ನಗರದ ಡಿ.ಸಿ. ಆಗಿದ್ದೇನೆ’ ಎಂದು  ಹೇಳಿದರು.

ಎಲ್ಲರೂ ಇನ್ನೂ ಆಶ್ಚರ್ಯಚಕಿತರಾದರು, "ಇನ್ನು ಮುಂದೆ, ಇದು ನಲವತ್ತು ವರ್ಷಗಳಿಗೊಮ್ಮೆ ಆಗಬಾರದು.  ಬದಲಿಗೆ, ನಾವು ಪ್ರತಿ ತಿಂಗಳು ಇದೇ  ಹೋಟೆಲ್ ನಲ್ಲಿ ಭೇಟಿಯಾಗೋಣ. 

ಆಗೆಲ್ಲ ಪ್ರತಿ ಬಾರಿಯೂ ನನ್ನ ಕಡೆಯಿಂದ  ಹಿರಿಯರೂ,    ನನ್ನ ಅಪ್ಪನ ಆತ್ಮೀಯ  ಸ್ನೇಹಿತರೂ ಆಗಿದ್ದ ತಮಗೆಲ್ಲರಿಗೂ ಪ್ರೀತಿ, ಅಭಿಮಾನಪೂರ್ವಕ  ಒಂದು ಗ್ರಾö್ಯಂಡ್ ಪಾರ್ಟಿ ಇರುತ್ತದೆ. ದಯವಿಟ್ಟು ನೀವೆಲ್ಲರೂ ಇದರಲ್ಲಿ  ತಪ್ಪದೇ ಭಾಗಿಯಾಗಬೇಕು" ಎಂದು ಕೇಳಿಕೊಂಡರು.

*ಸ್ನೇಹಿತರೇ, ನಿಮ್ಮ ಪ್ರೀತಿಪಾತ್ರರನ್ನು ಆಗಾಗ ಭೇಟಿಯಾಗುತ್ತಿರಿ. ಯಾರನ್ನಾದರೂ ಭೇಟಿಯಾಗಲು ಯಾವುದೇ ಪ್ರತ್ಯೇಕ ಅವಕಾಶಕ್ಕಾಗಿ ಕಾಯಬೇಡಿ. ಯಾವಾಗ ಬೇರ್ಪಡುವ ಸಮಯ ಬರುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ  

ಬದುಕಿನ ಪಯಣ ರೈಲು ಪ್ರಯಾಣದಂತೆ. ಯಾರದ್ದೋ ಸ್ಟೇಷನ್ ಬಂದಾಗ, ಆ ಕ್ಷಣವೇ ಅವರು ಡ್ರಾಪ್ ಆಗುತ್ತಾರೆ. ಕೆಲವು ಮಸುಕಾದ ನೆನಪುಗಳು ಮಾತ್ರ ಉಳಿಯುತ್ತವೆ!

ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಇತರ ಸಂದರ್ಭಗಳಲ್ಲಿ ಮತ್ತು ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ನಿಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಿ. 

ನಮ್ಮ ಸಂಬಂಧಗಳೆಂಬ ಮರವು ಪ್ರೀತಿಯೆಂಬ ನೀರಿನಿಂದ ಪೋಷಿಸಲ್ಪಡಲಿ.  ಯಾರನ್ನಾದರೂ  ಭೇಟಿಯಾಗಲು ನಾವು ಯಾವುದೇ ಕಾರಣಕ್ಕಾಗಿ ಅಥವಾ ಅವಕಾಶಕ್ಕಾಗಿ ಕಾಯಬೇಕಾಗಿಲ್ಲ.

ಆತ್ಮೀಯ ಸ್ನೇಹಿತರೇ, ನೀವು ಈ ಕಥೆಯನ್ನು ಓದಿದಾಗ, ಯಾರಾದರೂ ನಿಮ್ಮ ಸ್ನೇಹಿತರ ನೆನಪು ಆದರೆ, ತಕ್ಷಣ ಅವರೊಂದಿಗೆ ಎರಡು ನಿಮಿಷ ಮಾತನಾಡಿ. ಇಂದು ನಮ್ಮಲ್ಲಿ ಅದಕ್ಕಾಗಿ ಅವಶ್ಯವಿರುವ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಿವೆ.

ನಾವು ನಮ್ಮ ಸುತ್ತಮುತ್ತಲಿನ ಜನರಿಗಾಗಿ,  ನಮ್ಮ ಆಪ್ತರಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲೇಬೇಕು ಮತ್ತು ಜೀವನದ ಸೌಂದರ್ಯವನ್ನು ಆದಷ್ಟು  ಆನಂದದಿಂದ ಆಸ್ವಾದಿಸಬೇಕು.